ಎಸ್ಎಪಿ ಜಾರಿ ಮಾಡುವಂತೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ
ಕಬ್ಬಿಗೆ ನಿಗದಿಪಡಿಸಿದ ದರವನ್ನು ರೈತರಿಗೆ ಕೊಡಿಸಲು ಸರ್ಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಕಾರ್ಖಾನೆ ಮಾಲೀಕರು ಕೊಡುವಂತೆ, ಸರ್ಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಕರ್ತವ್ಯ. ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಸಭೆಯಲ್ಲಿ ಭಾಗವಹಿಸಿದ್ದರೂ, ಕಾರ್ಖಾನೆ ಮಾಲೀಕರು ಅವರ ಎದುರುಗಡೆ ಆಗಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಲಿ. ಕಾರ್ಖಾನೆ ಮಾಲೀಕರಿಗೆ ಕೇವಲ ಹೇಳಿದ್ದಾರೊ ಅಥವಾ ಒಪ್ಪಿಸಿದ್ದಾರೋ ಎಂದು ಸ್ಪಷ್ಟಪರಿಸಲಿ ಎಂದು ಆಗ್ರಹಿಸಿದರು.ಎಸ್ಎಪಿ ಜಾರಿ ಮಾಡಲಿ: ರಾಜ್ಯದಲ್ಲಿ ಎಸ್ಎಪಿ ಕಾನೂನು ಇದೆ. ನಮ್ಮ ಸರ್ಕಾರ ಇದ್ದಾಗ ಅದನ್ನು ಜಾರಿ ಮಾಡಿದ್ದೇವೆ. ಎಸ್ಎಪಿ ಕಾನೂನಿನಲ್ಲಿ ಬಹಳ ಸ್ಪಷ್ಟವಾಗಿದ್ದು, ಸಕ್ಕರೆ ಮತ್ತು ಇತರೆ ಉತ್ಪಾದನೆಯ ಖರ್ಚುಗಳು ಎಷ್ಟು, ಲಾಭದಲ್ಲಿ ರೈತನಿಗೆ ಎಷ್ಟು ,ಕಾರ್ಖಾನೆ ಎಷ್ಟು ಅನ್ನುವುದು ಇದೆ. ಎಸ್ಎಪಿ ಕಾನೂನು ತೆಗೆದು ನೋಡಲು ಮುಖ್ಯಮಂತ್ರಿ ತಯಾರಿಲ್ಲ. ಸಿಎಂ ಒಂದು ರೀತಿ ಖಾಜಿ ನ್ಯಾಯ ಮಾಡಲು ಹೋಗುತ್ತಿದ್ದಾರೆ. ಖಾಜಿ ನ್ಯಾಯ ಮಾಡಲು ಮುಖ್ಯಮಂತ್ರಿನೇ ಬೇಕಾ ಎಂದು ಪ್ರಶ್ನಿಸಿದರು.
ಸರ್ಕಾರ ನಿಗದಿ ಮಾಡಿರುವ ದರವನ್ನು ರೈತರಿಗೆ ಕೊಡಿಸುವುದು ಸರ್ಕಾರದ ಕರ್ತವ್ಯ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಯಾಕೆ ಗಲಾಟೆ ಇಲ್ಲ ಎಂದು ಪ್ರಶ್ನಿಸಿದ ಅವರು, ರಿಕವರಿ ಟೆಸ್ಟ್ ಕೂಡ ಮಾಡುವುದು ರಾಜ್ಯ ಸರ್ಕಾರ. ರಿಕವರಿ ಪರೀಕ್ಷೆಯನ್ನೂ ಕೂಡ ಪಾರದರ್ಶಕವಾಗಿ ಮಾಡಲಿ, ಬೆಳಗಾವಿ ಡಿಸಿ, ಬಿಜಾಪುರ ಡಿಸಿ ಕೆಲಸ ಮಾಡಿದಂತೆ ಹಾವೇರಿ ಡಿಸಿ ಕೆಲಸ ಮಾಡಲಿ, ರಾಜಕೀಯವಾಗಿ ಡಿಸಿಯವರಿಗೆ ಹೇಳುವವರು ಕೇಳುವವರು ಇಲ್ವಾ. ರಾಜ್ಯ ಸರ್ಕಾರಕ್ಕೆ ತೆರಿಗೆ ಬರುತ್ತದೆ, ಆ ಪ್ರಕಾರ ನ್ಯಾಯ ಕೊಡಿಸಲಿ ಎಂದು ಆಗ್ರಹಿಸಿದರು.
ಭ್ರಷ್ಟಾಚಾರದ ಪರಿಣಾಮ:ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾವ ರೀತಿ ಇರುತ್ತೆ, ಒಳಗಡೆ ಸಹ ಆ ರೀತಿ ಇರುತ್ತದೆ. ಎಸ್ಡಿಪಿಐ, ಪಿಎಫ್ ಐ ನವರ ಮೇಲಿನ ಕೇಸ್ಗಳನ್ನು ಹಿಂಪಡೆದುಕೊಳ್ಳುತ್ತಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಕೇಸ್ ಹಿಂಪಡೆದರೆ, ಇನ್ನು ನೀವು ಏನ್ ಸಂದೇಶ ಕಳಿಸುತ್ತೀರಿ. ಅದಕ್ಕಾಗಿ ಅಂತವರಿಗೆ ಪ್ರೋತ್ಸಾಹ ಸಿಗುತ್ತದೆ. ಮತ್ತೆ ಭ್ರಷ್ಟಾಚಾರದಿಂದ ಈ ರೀತಿ ಆಗುತ್ತದೆ. ಜೈಲಿನಿಂದ ಹಿಡಿದು ವಿಧಾನಸೌಧದ 3ನೇ ಮಹಡಿವರೆಗೂ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ ಎಂದು ಆರೋಪಿಸಿದರು.