ಕನ್ನಡಪ್ರಭ ವಾರ್ತೆ ಮಳವಳ್ಳಿ
ಕನ್ನಡ ಭಾಷೆ ಉಳಿವಿಗೆ ಶ್ರಮಿಸುವುದು ನಾಡಿನ ಜನರ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಹೇಳಿದರು.ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಲಿತ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿರುವ ಕಂದಾಯ ನಿರೀಕ್ಷಕರ ಸೇವೆ ಅನನ್ಯ ಎಂದು ಶ್ಲಾಘಿಸಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಗಾಂಧೀಜಿ ಅವರ ಆದರ್ಶ ಪಾಲನೆಯಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿರುವ ಕಂದಾಯ ನಿರೀಕ್ಷಕರಿಗೆ ಗಾಂಧಿ ಪುರಸ್ಕಾರ ನೀಡಿ ಅಭಿನಂದಿಸುವ ಕಾರ್ಯ ಪ್ರಶಂಸನೀಯ ಎಂದರು.ಗಾಂಧಿ ಕಂಡ ಭಾರತ ಎಂಬ ವಿಷಯ ಕುರಿತು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಲ್.ಚೇತನ್ ಕುಮಾರ್ ಮಾತನಾಡಿ, ಬಹುತೇಕ ಎಲ್ಲ ದೇಶಗಳು ಯುದ್ಧ ನಡೆಸಿ ಸ್ವಾತಂತ್ರ್ಯ ಗಳಿಸಿದರೆ, ಯುದ್ಧವಿಲ್ಲದೆ ಸ್ವಾತಂತ್ರ್ಯ ಗಳಿಸಿದ ಏಕೈಕ ರಾಷ್ಟ್ರವೆಂದರೆ ಅದು ಭಾರತ. ಇದಕ್ಕೆ ಮೂಲ ಕಾರಣ ಮಹಾತ್ಮ ಗಾಂಧಿ ಅವರ ಅಹಿಂಸಾ ಹೋರಾಟ ಎಂದು ಬಣ್ಣಿಸಿದರು.
ಈ ವೇಳೆ ಕಂದಾಯ ನಿರೀಕ್ಷಕರಾದ ಎಸ್.ಲಿಂಗಸ್ವಾಮಿ, ಚೇತನ್, ಪಿ.ಎಲ್.ಧರ್ಮೇಂದ್ರ, ಎಂ.ಪಿ.ರವಿಶಂಕರ್, ಎಂ.ಎಲ್.ಯೋಗೇಶ್, ಜಿ.ಎಸ್.ಶಿವಕುಮಾರ್, ರವಿಕುಮಾರ್, ಎಂ.ಜಿ.ಮಧುಸೂದನ್, ಮಂಜುನಾಥ್ ಹಾಗೂ ನಿವೃತ್ತ ಉಪ ತಹಸೀಲ್ದಾರ್ ಸೋಮಶೇಖರ್ ಸೇರಿದಂತೆ ಅನೇಕರಿಗೆ ಗಾಂಧಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ದಲಿತ ಕವಿ ಸಿದ್ದಲಿಂಗಯ್ಯ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ದಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ, ಮುಖಂಡರಾದ ಮಾದೇಗೌಡ, ಎಚ್.ಮಲ್ಲಿಕಾರ್ಜುನಯ್ಯ, ಶಿವನಂಜು, ಎಂ.ಎನ್.ಜಯರಾಜು, ಮಂಜುನಾಥ್, ಶಿವಣ್ಣ, ಚುಂಚಣ್ಣ ಪಾಲ್ಗೊಂಡಿದ್ದರು.