ಮತ್ತೆ ಅಬ್ಬರಿಸಿದ ಮಳೆ, ಮನೆಗಳು ಜಲಾವೃತ

KannadaprabhaNewsNetwork |  
Published : Aug 02, 2024, 12:48 AM IST
ಭಟ್ಕಳದ ವೃತ್ತದ ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಯಿತು. | Kannada Prabha

ಸಾರಾಂಶ

ಕದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಕದ್ರಾ ಜಲಾಶಯದ ಎಲ್ಲ 10 ಗೇಟ್ ಗಳನ್ನು ತೆಗೆದು 67 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗೂ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕದ್ರಾ ಜಲಾಶಯದ ನದಿ ಪಾತ್ರ, ತಗ್ಗು ಪ್ರದೇಶ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಲ್ಲಿ ಈಗ ಮುಳಗಡೆ ಭೀತಿ ಸೃಷ್ಟಿಯಾಗಿದೆ.

ಕಾರವಾರ: ಮಳೆ ಹಾವಳಿ ನಿಂತಿತು ಎಂದು ಜನತೆ ಸಮಾಧಾನದ ನಿಟ್ಟುಸಿರು ಬಿಡುವುದರೊಳಗೆ ಮತ್ತೆ ಧೋ ಎಂದು ಆರಂಭವಾಗಿದೆ. ನಿರಂತರ ಮಳೆಯಿಂದ ಹೊನ್ನಾವರ, ಅಂಕೋಲಾದಲ್ಲಿ ಪ್ರವಾಹ ಉಂಟಾಗಿದ್ದು, ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಹೊನ್ನಾವರದ ಗುಂಡಬಾಳ ಹಾಗೂ ಅಂಕೋಲಾದ ಕೇಣಿ ಹಳ್ಳ ಬುಧವಾರ ರಾತ್ರಿಯಿಂದ ಅಬ್ಬರಿಸುತ್ತಿರುವ ಪರಿಣಾಮವಾಗಿ ಮನೆಗಳು ಜಲಾವೃತವಾಗಿವೆ.ಹೊನ್ನಾವರ ತಾಲೂಕಿನ ಗುಂಡಬಾಳ ಹಾಗೂ ಭಾಸ್ಕೇರಿ ನದಿಗಳು ಉಕ್ಕೇರಿ ನದಿಯ ಇಕ್ಕೆಲಗಳಲ್ಲಿನ ಮನೆಗಳು, ತೋಟ ಜಲಾವೃತವಾಯಿತು. ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ, ಕಾವೂರು, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸಿದೆ. 9 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 341 ಜನರು ಆಶ್ರಯ ಪಡೆದಿದ್ದಾರೆ. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಾಕುಳಿಯ ವಿಶ್ವೇಶ್ವರ ಹೆಗಡೆ ಅವರ ನಿವಾಸದ ಮೇಲೆ ಬಂಡೆಗಳು ಉರುಳಿ ಅಪಾರ ಹಾನಿ ಉಂಟಾಗಿದೆ. ಅಂಕೋಲಾದಲ್ಲಿ ಆರ್ಭಟಿಸುತ್ತಿರುವ ಮಳೆಗೆ ಕೇಣಿಯ ಗಾಂವಕರವಾಡಾದ 15ಕ್ಕೂ ಹೆಚ್ಚು ಮನೆಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿದೆ. ಕಾಳಜಿ ಕೇಂದ್ರ ತೆರೆಯಲಾಗಿದ್ದು 46 ಜನರು ಆಶ್ರಯ ಪಡೆದಿದ್ದಾರೆ. ಕುಮಟಾದಲ್ಲಿ ಚಂಡಿಕಾ ನದಿ ಅಬ್ಬರಿಸುತ್ತಿದೆ. ನದಿಯ ಇಕ್ಕೆಲಗಳಲ್ಲಿನ ಮನೆಗಳು ಜಲಾವೃತವಾಗುವ ಆತಂಕ ಎದುರಾಗಿದೆ. ಉಪ್ಪಿನಪಟ್ಟಣ ಸೇತುವೆಯ ಮೇಲೆ ನೀರು ಪ್ರವಹಿಸುತ್ತಿದೆ. ಭಟ್ಕಳದಲ್ಲಿ ಎರಡು ದಿನಗಳಿಂದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಜಲಾವೃತವಾಗಿದೆ. ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಗಾ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತು. ಭಾರಿ ಮಳೆಯಿಂದಾಗಿ ಶುಕ್ರವಾರ ಜಿಲ್ಲೆಯ 7 ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕದ್ರಾ ಡ್ಯಾಂನಿಂದ 67 ಸಾವಿರ ಕ್ಯುಸೆಕ್ ನೀರು ಹೊರಕ್ಕೆ, ಪ್ರವಾಹ ಭೀತಿಕಾರವಾರ: ಭಾರಿ ಮಳೆಯಿಂದ ಭರ್ತಿಯಾದ ತಾಲೂಕಿನ ಕದ್ರಾ ಜಲಾಶಯದ ಎಲ್ಲ 10 ಗೇಟ್‌ಗಳನ್ನು ತೆರೆದು 67 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದರಿಂದ ಕಾಳಿ ನದಿ ಇಕ್ಕೆಲಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ. ಹಾಗೆ ಅರಗಾ, ಚೆಂಡಿಯಾ, ಈಡೂರುಗಳಲ್ಲಿ ಮನೆಗಳು ಜಲಾವೃತವಾಗಿವೆ.ಕದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಕದ್ರಾ ಜಲಾಶಯದ ಎಲ್ಲ 10 ಗೇಟ್ ಗಳನ್ನು ತೆಗೆದು 67 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗೂ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕದ್ರಾ ಜಲಾಶಯದ ನದಿ ಪಾತ್ರ, ತಗ್ಗು ಪ್ರದೇಶ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಲ್ಲಿ ಈಗ ಮುಳಗಡೆ ಭೀತಿ ಸೃಷ್ಟಿಯಾಗಿದೆ.ಹೆದ್ದಾರಿ, ಮನೆಗಳಿಗೆ ನುಗ್ಗಿದ ನೀರು: ತಾಲೂಕಿನ ಅರಗಾ, ಚೆಂಡಿಯಾ ಹಾಗೂ ತೋಡೂರುಗಳಲ್ಲಿ ಗುಡ್ಡದ ಮೇಲಿನಿಂದ ಹರಿದುಬರುವ ನೀರು ಸಮುದ್ರಕ್ಕೆ ಸರಾಗವಾಗಿ ಹರಿದುಹೋಗದೆ ಮನೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿಗೂ ನೀರು ನುಗ್ಗಿದೆ.ಮಳೆ ವಿವರ: ಬುಧವಾರ ಬೆಳಗ್ಗೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಉಂಟಾದ ಮಳೆಯ ವಿವರ(ಮಿ.ಮೀ.ಗಳಲ್ಲಿ) ಇಲ್ಲಿದೆ.ಅಂಕೋಲಾ ತಾಲೂಕಿನಲ್ಲಿ 199 ಮಿಮೀ ಮಳೆಯಾಗಿದೆ. ಭಟ್ಕಳ 120, ದಾಂಡೇಲಿ, 46.4, ಹಳಿಯಾಳ 35, ಹೊನ್ನಾವರ 111.9. ಜೋಯಿಡಾ 60, ಕಾರವಾರ 121.6, ಕುಮಟಾ 143.8, ಮುಂಡಗೋಡ 12.6, ಸಿದ್ದಾಪುರ 73.4, ಶಿರಸಿ 105.2 ಹಾಗೂ ಯಲ್ಲಾಪುರದಲ್ಲಿ 37.6 ಮಿಮೀ ಮಳೆಯಾಗಿದೆ.13 ಮನೆಗಳಿಗೆ ಭಾಗಶಃ ಹಾನಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾರವಾರದ 2, ಅಂಕೋಲಾದ 1, ಹೊನ್ನಾವರ ದ 9, ಜೋಯಿಡಾದ 1 ಮತ್ತು ಕುಮಟಾದ 1 ಸೇರಿದಂತೆ ಒಟ್ಟು 14 ಕಾಳಜಿ ಕೇಂದ್ರಗಳಲ್ಲಿ 550 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.ಇಂದು 7 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

ಕಾರವಾರ: ಜಿಲ್ಲೆಯ ಬಹುತೇಕ ಕಡೆ ವ್ಯಾಪಕ ಮಳೆ ಹಿನ್ನೆಲೆ 7 ತಾಲೂಕಿನ ಶಾಲೆ- ಕಾಲೇಜುಗಳಿಗೆ ಆ. ೨ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರು ಆದೇಶ ಹೊರಡಿಸಿದ್ದಾರೆ.ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ದಾಂಡೇಲಿಯಲ್ಲಿ ಭಾರಿ ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ