ಅಘನಾಶಿನಿ ನದಿ ಪೂಜೆ, ಆರತಿ ಕಾರ್ಯಕ್ರಮ
ತಾಲೂಕಿನ ಹಂಗಾರಖಂಡದ ಜೇನುಕೊಡ್ಲುವಿನಲ್ಲಿ ಶ್ರೀ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸೂಚನೆಯಂತೆ ವೇ. ವಿನಾಯಕ ಭಟ್ ಮತ್ತೀಹಳ್ಳಿ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಅಘನಾಶಿನಿ ನದಿ ಪೂಜೆ, ಆರತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ವೇ. ವಿನಾಯಕ ಭಟ್ ಮತ್ತೀಹಳ್ಳಿ ಪೂಜಾ ಕಾರ್ಯಕ್ರಮ ನಡೆಸಿ ಮಾತನಾಡಿ, ನಾವು ಪರಿಸರವನ್ನು ಪೂಜಿಸಿದರೇ ಅದು ನಮಗೆ ಸದಾ ಒಳಿತನ್ನು ಮಾಡುತ್ತದೆ. ನದಿಗೆ ವಿರುದ್ಧ ಕ್ರಿಯೆ ನಡೆಸಿದರೇ ನಮಗೂ ಸದಾ ಕೆಡುಕೇ ಆಗುತ್ತದೆ. ಪರಿಸರದ ವಿರುದ್ಧ ಕೆಡುಕು ಮಾಡುವವರ ಮನವೊಲಿಸಿ ಅವರು ಪರಿಸರ ಪ್ರೇಮ ಮಾಡುವ ಹಾಗೇ ಮಾಡಬೇಕು ಎಂದರು. ವಿಶೇಷ ಆಮಂತ್ರಿತ ಅನಂತಮೂರ್ತಿ ಹೆಗಡೆ ಶಿರಸಿ ಮಾತನಾಡಿ, ಈಗಿನ ಪ್ರಪಂಚದಲ್ಲಿ ನಮ್ಮ ಬುಡಕ್ಕೆ ಯಾವುದು ಬರುತ್ತದೆಯೋ ಅವಾಗಲೇ ನಾವು ಎಚ್ಚೇತ್ತುಕೊಳ್ಳುವುದು. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಅಘನಾಶಿನಿ ನದಿ ನಮ್ಮದು. ಯಥಾಸ್ಥಿತಿ ಕಾಪಾಡುವುದು ನಮ್ಮ-ನಿಮ್ಮೆಲ್ಲರ ಹೊಣೆ ಎಂದರು.ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೋಪಾಲಕೃಷ್ಣ ಹೆಗಡೆ ತಂಗಾರಮನೆ ಮಾತನಾಡಿ, ಅಘನಾಶಿನಿ ರಕ್ಷಿಸುವ ಕರ್ತವ್ಯ ನಮ್ಮದು ಎಂದರು. ಅಘನಾಶಿನಿ ಆರತಿ ಕಾರ್ಯಕ್ರಮದ ಸಂಘಟಕ ಮಂಜುನಾಥ ಎಂ. ಹೆಗಡೆ ಹಂಗಾರಖಂಡ ದಂಪತಿಗಳು ಪೂಜಾ ಕಾರ್ಯವನ್ನು ನೆರವೇರಿಸಿದರು. ಅತಿಥಿ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಸದಸ್ಯ ಎಂ. ಆರ್. ಹೆಗಡೆ ಬಾಳೇಜಡ್ಡಿ ಮತ್ತೀಹಳ್ಳಿ ಮಾತನಾಡಿದರು.ಮತ್ತೀಹಳ್ಳಿ ಭಜನಾ ಮಂಡಳಿ, ಕಲ್ಗದ್ದೆ ಭಜನಾ ಮಂಡಳಿ, ತ್ಯಾಗಲಿ ಭಜನಾ ಮಂಡಳಿ, ಹಂಗಾರಖಂಡದ ಭಜನಾ ಮಂಡಳಿಯ ಮಾತೆಯರು ಮತ್ತು ಹಂಗಾರಖಂಡದ ನಾಗಚೌಡೇಶ್ವರಿ ಭಜನಾ ಮಂಡಳಿಯ ಮಹಾಬಲೇಶ್ವರ ಡಿ. ಹೆಗಡೆ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀನಿವಾಸ ಭಾಗ್ವತ್ , ಮದ್ದಲೆಗಾರ ಕುಮಾರ ಮಾಗೋಡುಜಡ್ಡಿ, ಚಂಡೆ ವಾದಕ ವಿಘ್ನೇಶ್ವರ ಗೌಡ ಕೆಸರಕೋಪ್ಪ ಪ್ರಸ್ತುತಿ ಯಕ್ಷ ಪದ್ಯ ನಡೆಸಿಕೊಟ್ಟರು. ಸಂಘಟಕ ನಟರಾಜ ಎಂ. ಹೆಗಡೆ, ಶಶಿಧರ ಹೆಗಡೆ, ಪ್ರಕಾಶ ಹೆಗಡೆ, ಗಣಪತಿ ವಿ. ಹೆಗಡೆ, ರಮೇಶ ಟಿ. ನಾಯ್ಕ, ನಾಗರಾಜ ಆರ್. ನಾಯ್ಕ ಮಾಬ್ಲೇಶ್ವರ ಡಿ.ಹೆಗಡೆ, ಗಣಪತಿ ಅ.ಹೆಗಡೆ, ವಾಸುದೇವ ನಾಯ್ಕ ಸಹಕರಿಸಿದರು. ತ್ಯಾಗಲಿ ಗ್ರಾ ಪಂ ವ್ಯಾಪ್ತಿಯ ಇನ್ನೂರಕ್ಕೂ ಹೆಚ್ಚು ಜನರು ನದಿ ಪೂಜೆ ಕಾರ್ಯದಲ್ಲಿ ಪಾಲ್ಗೊಂಡರು.