349 ಕಳ್ಳತನ ಪ್ರಕರಣದಲ್ಲಿ ₹1.91 ಕೋಟಿ ಮೌಲ್ಯದ ವಸ್ತುಗಳು ವಶ: ಎಸ್ಪಿ ಡಾ. ಶೋಭಾರಾಣಿ

KannadaprabhaNewsNetwork | Published : Jan 8, 2025 12:16 AM

ಸಾರಾಂಶ

ವಿವಿಧ ಕಳ್ಳತನ ಪ್ರಕರಣಗಳಲ್ಲಿ 106ಪ್ರಕರಣ ಪತ್ತೆ ಹಚ್ಚಿ, ಈ ಅವಧಿಯಲ್ಲಿ ಕಳ್ಳತನವಾಗಿದ್ದ ₹4.94 ಕೋಟಿ ಮೌಲ್ಯದ ವಸ್ತುಗಳ ಪೈಕಿ ₹1.91 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಳ್ಳಾರಿ: ಕಳೆದ ಜನವರಿಯಿಂದ ನವೆಂಬರ್‌ ವರೆಗೆ ಜಿಲ್ಲೆಯಲ್ಲಿ ನಡೆದ 349 ವಿವಿಧ ಕಳ್ಳತನ ಪ್ರಕರಣಗಳಲ್ಲಿ 106 ಪ್ರಕರಣ ಪತ್ತೆ ಹಚ್ಚಿ, ಈ ಅವಧಿಯಲ್ಲಿ ಕಳ್ಳತನವಾಗಿದ್ದ ₹4.94 ಕೋಟಿ ಮೌಲ್ಯದ ವಸ್ತುಗಳ ಪೈಕಿ ₹1.91 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ. ಶೋಭಾರಾಣಿ ತಿಳಿಸಿದರು.

ನಗರದ ಎಸ್ಪಿ ಕಚೇರಿಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಪರ್ಟಿಗಳ ಪರೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಅವಧಿಯಲ್ಲಿ ಒಂದು ದರೋಡೆ, ಮೂರು ಸುಲಿಗೆ, ಆರು ಸರಗಳ್ಳತನ, ಹಗಲು ಕನ್ನ 17, ರಾತ್ರಿ ಕನ್ನ 80, ಮನೆ ಕಳ್ಳತನ 14 ಹಾಗು 219 ಸಾಮಾನ್ಯ ಕಳ್ಳತನಗಳು ನಡೆದಿವೆ. ಇದರಲ್ಲಿ 95 ದ್ವಿಚಕ್ರ ವಾಹನಗಳು, 2 ಲ್ಯಾಪ್‌ಟಾಪ್‌, 2563.67 ಗ್ರಾಂ, ಚಿನ್ನಾಭರಣ, 7735 ಗ್ರಾಂ ಬೆಳ್ಳಿ, 26.48 ಲಕ್ಷ ನಗದು, 64 ಜಾನುವಾರು ಮೊದಲಾದವುಗಳಿವೆ. ಕಳುವಾದ ₹4.94 ಕೋಟಿ ವಸ್ತುಗಳ ಪೈಕಿ ₹1.91 ಕೋಟಿ ವಶಪಡಿಸಿಕೊಂಡು, ಅವುಗಳಲ್ಲಿ ₹1.48 ಕೋಟಿ ಮೌಲ್ಯದ ಮಾಲನ್ನು ವಾರಸುದಾರರಿಗೆ ಹಿಂದುರಿಗಿಸಲಾಗಿದೆ. ಪತ್ತೆ ಹಚ್ಚಿದ 106 ಪ್ರಕರಣಗಳಲ್ಲಿ 83 ಜನರನ್ನು ಬಂಧಿಸಿ, ಶೇ. 39ರಷ್ಟು ಸಾಧನೆ ಮಾಡಿದೆ ಎಂದು ತಿಳಿಸಿದರು.

2024ನೇ ಸಾಲಿನಲ್ಲಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಜನವರಿಯಿಂದ ಡಿಸೆಂಬರ್‌ ವರೆಗೆ ಒಟ್ಟು 58,375 ಪ್ರಕರಣಗಳನ್ನು ದಾಖಲಿಸಿ 2 ಕೋಟಿ 85 ಲಕ್ಷ ದ 58 ಸಾವಿರ ದಂಡ ವಸೂಲಿ ಮಾಡಲಾಗಿದೆ. ಕೊಟ್ಟಾ ಕಾಯ್ದೆ ಅಡಿಯಲ್ಲಿ 5917 ಪ್ರಕರಣಗಳನ್ನು ದಾಖಲಿಸಿ ₹4,86,640 ದಂಡ ವಸೂಲಿ ಮಾಡಲಾಗಿದೆ. ಇನ್ನು ಸಿ.ಎನ್‌. ಪೊಲೀಸ್‌ ಠಾಣೆಯಲ್ಲಿ 2024ನೇ ಸಾಲಿನಲ್ಲಿ 96 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಜನತೆ ₹1510 ಕೋಟಿ ಕಳೆದುಕೊಂಡಿದ್ದಾರೆ. ಇದರಲ್ಲಿ ₹3 ಕೋಟಿ, 63 ಲಕ್ಷ ದ 48 ಸಾವಿರದ 290 ಅನ್ನು ಖಾತೆಯಲ್ಲಿ ಫ್ರೀಜ್‌ ಮಾಡಿಸಿ ದೂರುದಾರರ ಖಾತೆಗೆ ಮರಳಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ನಗದು, ಚಿನ್ನಾಭರಣ, ದ್ವಿಚಕ್ರ ವಾಹನ ಸೇರಿದಂತೆ ನಾನಾ ವಸ್ತುಗಳನ್ನು ಐಜಿಪಿ ಲೋಕೇಶ್‌ ಕುಮಾರ್‌ ಹಾಗೂ ಎಸ್ಪಿ ಶೋಭಾರಾಣಿ ಅವರು ವಾರಸುದಾರರಿಗೆ ಹಸ್ತಾಂತರಿಸಿದರು.

Share this article