ಕನ್ನಡಪ್ರಭ ವಾರ್ತೆ ಮೈಸೂರುಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಯಸಸ್ಸಿನ ಹಿಂದೆ ನಮ್ಮಲ್ಲಿರುವ ಶಿಕ್ಷಕರ ಶಕ್ತಿ ಅಡಗಿದೆ ಎಂದು ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಅಭಿಪ್ರಾಯಪಟ್ಟರು.ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಮೈಸೂರಿನಲ್ಲಿ ಸದ್ವಿದ್ಯಾ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಪರಂಪರೆ ಮತ್ತು ಮನ್ನಣೆ ಇದೆ. ನಮ್ಮ ಸಂಸ್ಥೆಯ ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ದೊರೆಯುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳ ಪಾತ್ರವೂ ಅಪಾರವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯ ಪೈಪೋಟಿಯ ನಡುವೆಯು ಸದ್ವಿದ್ಯಾ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ ಎಂದರು.ಸಂಸ್ಥೆ ಉಪಾಧ್ಯಕ್ಷ ಎಸ್. ಬಾಲಾಜಿ ಮಾತನಾಡಿ, ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಪಿಯು ಶಿಕ್ಷಣ ಜೀವನದ ಅತ್ಯಂತ ಪ್ರಮುಖ ಘಟ್ಟ, ಮುಂದಿನ ಭವಿಷ್ಯದಲ್ಲಿ ನೀವು ಯಶಸ್ಸು ಗಳಿಸುವಂತಾಗಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿ ಬಾಬು ಮಾತನಾಡಿ, ಪಿಯುಸಿ ನಿಮ್ಮ ಜೀವನದ ಪ್ರಮುಖ ಹಂತ ಹಾಗಾಗಿ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಿರಿ. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ವೈ.ಆರ್. ರಮೇಶ್, ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶದ ಆಧಾರದ ಮೇಲೆ ತರಗತಿಗಳನ್ನು ಪ್ರತ್ಯೇಕಿಸಲಾಗುತ್ತದೆ ಎಂಬ ಆರೋಪ ಇದೆ. ಆದರೆ ನಮ್ಮ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತೇವೆ. ಅವರು ತೆಗೆದುಕೊಂಡ ವಿಷಯಗಳಿಗೆ ಅನುಗುಣವಾಗಿ ವಿಭಾಗಿಸುತ್ತೇವೆಯೇ ಹೊರತು ಫಲಿತಾಂಶದ ಆಧಾರದ ಮೇಲೆ ಅಲ್ಲ ಎಂದು ಹೇಳಿದರು.ಎಲ್ಲಾ ವಿದ್ಯಾರ್ಥಿಗಳ ಮೇಲೂ ವೈಯಕ್ತಿಕವಾಗಿ ಗಮನ ಹರಿಸಲಾಗುವುದು. ಅವರ ಶೈಕ್ಷಣಿಕ ಪ್ರಗತಿಯನ್ನು ಮೇಲುಸ್ತುವಾರಿ ಮಾಡುತ್ತೇವೆ. ಆದ್ದರಿಂದಲೇ ಉತ್ತಮ ಫಲಿತಾಂಶ ಬರುತ್ತಿದೆ ಎಂದರು.ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ ರಾಂಕ್ ಪಡೆದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕೆ. ಚಿತ್ರಸ್ಫೂರ್ತಿ (ರಾಜ್ಯಕ್ಕೆ ನಾಲ್ಕನೇ ಸ್ಥಾನ), ಎಸ್. ಸಂಜನಾ, ಭಕ್ತಿ ಎ. ಜೈನ್, ಆರ್. ಮಾನ್ಯ, ಎಂ.ಎನ್. ರಿಷಿತ್ ಗೌಡ, ರಿಯಾ ಪಿ. ಜೈನ್, ಎಂ. ವಿದ್ಯಾ ಅವರಿಗೆ ಬಳ್ಳಿ ಫಲಕ ಮತ್ತು ಪದಕ ನೀಡಿ ಪುರಸ್ಕಾರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.ಸಹ ಕಾರ್ಯದರ್ಶಿ ಕೆ.ಎನ್. ಫಣೀಶ್ ಹಾಗೂ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಸಿ.ಎನ್. ನಾಗರಾಜು ಇದ್ದರು. ಉಪ ಪ್ರಾಂಶುಪಾಲೆ ಜಿ.ಕೆ. ಇಂದುಮತಿ ವಂದಿಸಿದರು. ಟಿ.ಎಸ್. ಶ್ರೀವಿದ್ಯಾ ಪ್ರಾರ್ಥಿಸಿದರು. ಡಾ.ಕೃ.ಪಾ. ಮಂಜುನಾಥ್ ನಿರೂಪಿಸಿದರು.