ಕಾರವಾರ: ಶಿರೂರು ಗುಡ್ಡಕುಸಿತದಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ ಪುತ್ರಿಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೈಗಾದ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸಿದ್ದಾರೆ. ಜಗನ್ನಾಥ ನಾಯ್ಕ ಅವರ ಪುತ್ರಿ ಕೃತ್ತಿಕಾಗೆ ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಚ್ಇಎಲ್ ಕಂಪನಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಹಾಗೂ ಕಂಪನಿ ಖಚಿತಪಡಿಸಿದೆ. ಜೆಡಿಎಸ್ ಯುವ ಮುಖಂಡ ಸೂರಜ್ ಸೋನಿ ಸಹ ಉದ್ಯೋಗ ನೀಡಿಕೆಯನ್ನು ಖಚಿತಪಡಿಸಿದ್ದಾರೆ. ಶಿರೂರು ಗುಡ್ಡಕುಸಿತ ವೀಕ್ಷಣೆಗೆ ಕುಮಾರಸ್ವಾಮಿ ಆಗಮಿಸಿದಾಗ ಜಗನ್ನಾಥ ನಾಯ್ಕ ಪುತ್ರಿಗೆ ಉದ್ಯೋಗದ ಭರವಸೆ ನೀಡಿದ್ದರು. ಜಗನ್ನಾಥ ನಾಯ್ಕ ಅವರ ಇನ್ನೊಬ್ಬ ಪುತ್ರಿಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ರಾಜ್ಯ ಸರ್ಕಾರ ಉದ್ಯೋಗ ಕಲ್ಪಿಸಿತ್ತು.
ಭಟ್ಕಳ: ಎಲ್ಲೆಡೆ ಗಣೇಶೋತ್ಸವದ ಆಚರಣೆ ನಡೆಯುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಾರವಾರದ ಬಾಂಬ್ ನಿಷ್ಕ್ರಿಯ ದಳದವರು ಶ್ವಾನದೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣದಲ್ಲಿ ಕಳೆದ 41 ವರ್ಷಗಳಿಂದ ನಡೆಯುತ್ತಿರುವ ರಿಕ್ಷಾ ಚಾಲಕರು ಮಾಲೀಕರ ಸಂಘದ ಗಣೇಶೋತ್ಸವ ನಡೆಯುತ್ತಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು, ಸಿಬ್ಬಂದಿ ಮತ್ತು ಶ್ವಾನ ಭೇಟಿ ನೀಡಿ ಪರಿಶೀಲಿಸಿತು. ಈ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಂಜಯ್ ಭೋವಿ, ಆನಂದು ನಾಯ್ಕ, ಶೀಕು ಪೂಜಾರಿ ಇದ್ದರು.