- ಹೆಣ್ಣುಮಕ್ಕಳು, ಮಹಿಳೆಯರ ಹಕ್ಕುಗಳ ರಕ್ಷಣೆ, ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ಜಾರಿಗೆ ಮನವಿ - - -
ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಆರುಷಿ ಮೈ ಡಾಟರ್ ಯೋಜನೆಯನ್ನು ದೇಶಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿರುವುದಾಗಿ ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆ ರೂವಾರಿ ಹೊನ್ನಾಳಿಯ ಚನ್ನೇಶ ಎಂ. ಜಕ್ಕಾಳಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರೂ ಆದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ, ಈ ಸಂಬಂಧ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಿದ್ಧಪಡಿಸಿದ ಆರುಷಿ ಮೈ ಡಾಟರ್ ಯೋಜನೆ ಬಗ್ಗೆ ಚರ್ಚಿಸಿ, ಕೇಂದ್ರದ ಗಮನ ಸೆಳೆಸಬೇಕು. 14 ವರ್ಷದಿಂದ ತಾವು ಹೋರಾಟ ನಡೆಸಿ, ರೂಪಿಸಿದ ಆರುಷಿ ಯೋಜನೆ ಕೇವಲ ದಾವಣಗೆರೆಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯಮಟ್ಟಕ್ಕೂ ಸಂಬಂಧಿಸಿದ ಅತಿ ಸೂಕ್ಷ್ಮ ವಿಷಯ. ಹಾಗಾಗಿ, ಸಂಸತ್ ಕಲಾಪದಲ್ಲಿ ಯೋಜನೆ ಬಗ್ಗೆ ವಿಷಯ ಮಂಡಿಸುವಂತೆ ಅವರು ಆಗ್ರಹಿಸಿದರು.
ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಿದ್ಧಪಡಿಸಿದ ಆರುಷಿ ಮೈ ಡಾಟರ್ ಯೋಜನೆ ಒಂದೇ ಇಲಾಖೆಗೆ ಸಂಬಂಧಿಸಿದ್ದಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಹೀಗೆ ಹಲವಾರು ಇಲಾಖೆಗೆ ಸಂಬಂಧಿಸಿದ್ದಾಗಿದೆ. ಎಲ್ಲ ಇಲಾಖೆಗಳ ಕಾರ್ಯಗಳ ಬಗ್ಗೆಯೂ ಯೋಜನೆಯಲ್ಲಿ ತಿಳಿಸಲಾಗಿದೆ. ಅತಿ ಮುಖ್ಯವಾಗಿ ಆರುಷಿ ಮೈ ಡಾಟರ್ ಯೋಜನೆ ಬಗ್ಗೆ ಸಂಸತ್ನಲ್ಲಿ ಚರ್ಚೆ ನಡೆಸಿದರೆ ಇಡೀ ದೇಶದ ಗಮನ ಸೆಳೆದಂತಾಗುತ್ತದೆ. ಕೇಂದ್ರವೂ ಈ ವಿಚಾರದ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ದೇಶದ ಪ್ರತಿ ಜಿಲ್ಲೆ, ಹಳ್ಳಿ ಹಳ್ಳಿಯಲ್ಲೂ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ, ಉಚಿತ ಔಷಧ ಹಾಗೂ ಹೆರಿಗೆ ಸೌಲಭ್ಯ ಸಿಗಬೇಕು. ಕಡ್ಡಾಯ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ನಡೆಯಬೇಕು. ಪ್ರತಿ ಮಗುವಿಗೂ ಉಚಿತ ಕಡ್ಡಾಯ ಶಿಕ್ಷಣ, ಕಡ್ಡಾಯ ವಿವಾಹ ನೋಂದಣಿ, ಪೌಷ್ಟಿಕ ಆಹಾರ ಹಾಗೂ ರಕ್ಷಣೆ ಸಿಗುವಂತಾಗಬೇಕು. ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣವಾಗಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ನೆರವು ನೀಡಲು ದೇಶದಾದ್ಯಂತ 24 ಗಂಟೆ ಲಭ್ಯವಿರುವ ರಾಷ್ಟ್ರೀಯ 100 ಗಂಭೀರ ಸಮಸ್ಯೆಗೆ ಪರಿಹಾರ ನೀಡುವ ಅರುಷಿ ಯೋಜನೆ ಜಾರಿಗೊಳಿಸಬೇಕಿದೆ ಎಂದು ಚನ್ನೇಶ ಎಂ.ಜಕ್ಕಾಳಿ ತಿಳಿಸಿದರು.
- - -
- ಚನ್ನೇಶ ಎಂ. ಜಕ್ಕಾಳಿ, ರೂವಾರಿ, ಆರುಷಿ ಮೈ ಡಾಟರ್ ಯೋಜನೆ.
-17ಕೆಡಿವಿಜಿ2: ದಾವಣಗೆರೆಯಲ್ಲಿ ಶುಕ್ರವಾರ ಆರುಷಿ ಮೈ ಡಾಟರ್ ಯೋಜನೆ ರೂವಾರಿ ಚನ್ನೇಶ ಎಂ. ಜಕ್ಕಾಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.