ಜಲಜೀವನ್‌ ಮಿಷನ್‌ ಕಾಮಗಾರಿ ಅವೈಜ್ಞಾನಿಕ ಆರೋಪ<bha>;</bha> ವಾರದೊಳಗೆ ಪರಿಶೀಲನಾ ವರದಿಗೆ ದಿನೇಶ್‌ ಗುಂಡೂರಾವ್‌ ಸೂಚನೆ

KannadaprabhaNewsNetwork | Published : Jan 13, 2024 1:35 AM

ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕೆಡಿಪಿ ತೈಮಾಸಿಕ ಸಭೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಜಲಜೀವನ್‌ ಮಿಷನ್‌ನಡಿ ಮೂರು ಹಂತಗಳಲ್ಲಿ ನಡೆದಿರುವ ಕಾಮಗಾರಿಗಳ ವಿವರ, ನೀರು ಪೂರೈಕೆ ಮಾಹಿತಿ ಸೇರಿದಂತೆ ಸಂಪೂರ್ಣ ಯೋಜನೆಯ ಸಮಗ್ರ ವರದಿಯನ್ನು ವಾರದೊಳಗೆ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯೋಜನಾಧಿಕಾರಿಗೆ ಸೂಚನೆ ನೀಡಿದರು.

ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಈ ಕಾಮಗಾರಿ ಕುರಿತ ಆಕ್ಷೇಪಗಳಿಗೆ ಸಚಿವರು ಉತ್ತರಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್‌ ಮಾತನಾಡಿ, ಯೋಜನೆಯು ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಪ್ರಥಮ ಹಂತದ 458 ಕಾಮಗಾರಿಗಳು 125.68 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿವೆ. 2ನೇ ಹಂತದ 134 ರಲ್ಲಿ 32 ಪೂರ್ಣಗೊಂಡಿದ್ದು, 102 ಪ್ರಗತಿಯಲ್ಲಿವೆ. 3ನೇ ಹಂತದಲ್ಲಿ 108 ಕಾಮಗಾರಿಗಳಲ್ಲಿ 11 ಕಾಮಗಾರಿ ಪೂರ್ಣಗೊಂಡು, 97 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವಿವರ ನೀಡಿದರು.ಪ್ರಥಮ ಹಂತದಲ್ಲಿ ಪೂರ್ಣಗೊಂಡಿರುವ 458 ಕಾಮಗಾರಿಗಳಿಂದ ನೀರು ಪೂರೈಕೆ ಆರಂಭವಾಗಿದೆಯೇ ಎಂಬ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿ ನಿರುತ್ತರರಾಗಿದ್ದರು. ಉದ್ದೇಶ ಈಡೇರದಿದ್ದರೆ ಈ ರೀತಿ ಕೋಟಿಗಟ್ಟಲೆ ವ್ಯಯಿಸಿ ಮಾಡಲಾಗುವ ಕಾಮಗಾರಿಯಿಂದ ಲಾಭವೇನು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎಲ್ಲೆಲ್ಲಿ ಕಾಮಗಾರಿ ಅಸಮರ್ಪವಾಗಿವೆಯೇ ಅದನ್ನು ಸರಿಪಡಿಸಬೇಕು. ಶೀಘ್ರದಲ್ಲೇ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಳಪೆ, ಅವೈಜ್ಞಾನಿಕ ಕಾಮಗಾರಿ ಕಂಡುಬಂದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಿಂಡಿ ಅಣೆಕಟ್ಟುಗಳ ಸಾಮರ್ಥ್ಯ ಅಧ್ಯಯನಕ್ಕೆ ಆಗ್ರಹ: ಕಿರು ನೀರಾವರಿ ಯೋಜನೆಯಡಿ ದ.ಕ.ಜಿ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಕ್ಕೆ ಪೂರಕವಾಗಿ ಹಲಗೆ ಹಾಕುವ ಕಾರ್ಯ ನಡೆದಿಲ್ಲ. ಊರಿನವರೇ ಈ ಕಾರ್ಯ ಮಾಡುವ ಪರಿಸ್ಥಿತಿ ಇದೆ ಎಂದು ವಿಧಾನ ಪರಿಷತ್‌ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಶಾಸಕ ಹರೀಶ್‌ ಪೂಂಜ ಗಮನ ಸೆಳೆದರು.ಜಿಲ್ಲೆಯಲ್ಲಿ 447 ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದ್ದು, ಅದರಲ್ಲಿ 297 ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ 3 ಕೋಟಿ ರು. ವೆಚ್ಚದ ಅಂದಾಜುಪಟ್ಟಿತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿ ಉತ್ತರಿಸಿದರು.ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಪ್ರತಿಕ್ರಿಯಿಸಿ, ಅಂತರ್ಜಲ ಸಂರಕ್ಷಣೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಾಗಿ ಇದರ ಸಾಮರ್ಥ್ಯದ ಕುರಿತಂತೆ ಅಧ್ಯಯನ ಆಗಬೇಕು ಎಂದರು.ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿಗೆ ಸೂಚನೆ: ಪ್ಲಾಸ್ಟಿಕ್‌ ಬಳಕೆ ನಿಷೇಧವಿದ್ದರೂ ಕಲ್ಯಾಣ ಮಂಟಪ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿಯೂ ಪ್ಲಾಸ್ಟಿಕ್‌ ಬಾಟಲ್‌ ಹಾಗೂ ಲೋಟಗಳ ಬಳಕೆ ಚಾಲ್ತಿಯಲ್ಲಿದೆ. ಇದರ ಬದಲು ಸ್ಟೀಲ್‌ ಲೋಟ ಬಳಕೆಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಪ್ರಸ್ತಾಪಿಸಿದರು.

ಇನ್ಸುಲಿನ್‌ ಪೂರೈಕೆಗೆ ಕ್ರಮ: ಹಿಂದೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಡಯಾಬಿಟಿಸ್‌ ರೋಗಿಗಳಿಗಾಗಿ ಇನ್ಸುಲಿನ್‌ ನೀಡುವ ವ್ಯವಸ್ಥೆ ಇದ್ದು, ಕಳೆದೊಂದು ವರ್ಷದಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿ.ಪಂ. ನಾಮನಿರ್ದೇಶಿತ ಸದಸ್ಯ ಸಂತೋಷ್‌ ಕುಮಾರ್‌ ಪ್ರಸ್ತಾಪಿಸಿದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಹಮೀದ್‌ ಕಿನ್ಯ, ಸುಜಯ ಕೃಷ್ಣ, ರಾಜಶೇಖರ ಜೈನ್‌ ಇದ್ದರು.ಸಂಪ್ರದಾಯಿಕ ಕೋಳಿ ಅಂಕಕ್ಕೆ ಅವಕಾಶ: ದ.ಕ. ಜಿಲ್ಲೆಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕಂಬಳದಂತೆ ಕೋಳಿ ಅಂಕ ಕೂಡ ಉತ್ಸವಗಳ ಸಂದರ್ಭ ನಡೆಯುತ್ತಿದೆ. ಆದರೆ ಇದನ್ನು ನಿಲ್ಲಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಇದಕ್ಕೆ ಅನುಮತಿಗಾಗಿ ನಾಲ್ಕು ಹಂತಗಳಲ್ಲಿ ಆಯೋಜಕರು ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಕೋಳಿ ಅಂಕದ ಹೆಸರಿನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಸಮೀಕ್ಷೆ ಮಾಡಿ ಇಂತಹ ಸಂಪ್ರದಾಯಬದ್ಧ ಕೋಳಿ ಅಂಕಕ್ಕೆ ಅಡಚಣೆ ಆಗದಂತೆ ಕ್ರಮ ವಹಿಸಬೇಕು ಎಂದು ಶಾಸಕ ಹರೀಶ್‌ ಪೂಂಜ ಆಗ್ರಹಿಸಿದರು.

ಪುತ್ತೂರು ಶಾಸಕ ಅಶೋಕ್‌ ರೈ ಮಾತನಾಡಿ, ಸಂಪ್ರದಾಯ ಬದ್ಧ ಕೋಳಿ ಅಂಕಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಒಂದೆರಡು ದಿನ ನಡೆಸುವ ಈ ಕೋಳಿ ಅಂಕ ನಾಲ್ಕೈದು ದಿನಗಳಿಗೆ ಮುಂದುವರಿದರೆ ಅದು ಜೂಜಿಗೆ ಕಾರಣವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು. ಪ್ರತಾಪ್‌ಸಿಂಹ ನಾಯಕ್‌ ಕೂಡ ದನಿಗೂಡಿಸಿದರು.ಈ ಸಂದರ್ಭ ದ.ಕ. ಎಸ್ಪಿ ರಿಷ್ಯಂತ್‌ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಕೋಳಿ ಅಂಕಗಳಿಗೆ ಅನುಮತಿ ನೀಡುವ ಅಧಿಕಾರ ಪೊಲೀಸ್‌ ಇಲಾಖೆಗೆ ಇರುವುದಿಲ್ಲ. ಆ ರೀತಿ ಅನುಮತಿಗಾಗಿ ಅಲೆದಾಡಿರುವ ದಾಖಲೆಗಳಿದ್ದರೆ ಒದಗಿಸಿ, ನನ್ನ ಗಮನಕ್ಕೆ ತನ್ನಿ. 112ಕ್ಕೆ ದೂರು ಬಂದರೆ, ಕಾನೂನು ಪ್ರಕಾರವೇ ಪೊಲೀಸರು ಕೋಳಿ ಅಂಕ ನಿಲ್ಲಿಸುತ್ತಾರೆ ಎಂದು ಹೇಳಿದರು.

ಅಧಿಕಾರಿಗಳಿಗೆ ಭೋಜೇಗೌಡ ತರಾಟೆ: ಸಭೆಯ ಆರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಅವರು ಸಭೆಯ ನಡವಳಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ಗುರಿಪಡಿಸಿದ ವಿದ್ಯಮಾನ ನಡೆಯಿತು.

ಅನುಪಾಲನಾ ವರದಿಯನ್ನು ಸಭೆಯಲ್ಲಿ ಒದಗಿಸಲಾಗುತ್ತದೆ. ಸಭೆಯ ಬಳಿಕ ಪಾಲನಾ ವರದಿಯನ್ನು ವಾರದೊಳಗೆ ಸಚಿವರ ಸಹಿಯ ಬಳಿಕ ಮೇಲ್‌ ಮೂಲಕ ಸದಸ್ಯರಿಗೆ ತಲುಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಮಜಾಯಿಸಿ ನೀಡಿದರು.

ಈ ಮಾತಿನಿಂದ ಸಮಾಧಾನಗೊಳ್ಳದ ಭೋಜೇಗೌಡ ಅಧಿಕಾರಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಸಭೆಯಿಂದ ಇಂತಹ ಯಾವುದೇ ಗೊಂದಲ ಆಗದಂತೆ ಕ್ರಮ ವಹಿಸುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದರು.

ಶಾಸಕ ವೇದವ್ಯಾಸ್‌ ಕಾಮತ್‌- ಅಶೋಕ್‌ ರೈ ವಾಗ್ವಾದ!: ಹೊಸ ಸರ್ಕಾರರಕಾರ ಬಂದ ಮೇಲೆ ದ.ಕ. ಜಿಲ್ಲೆಯಲ್ಲಿ ಡಯಾಲಿಸಿಸ್‌ ಯಂತ್ರಗಳ ವ್ಯವಸ್ಥೆ ಉತ್ತಮವಾಗಿದೆ ಎಂದು ಶಾಸಕ ಅಶೋಕ್‌ ರೈ ಹೇಳಿದಾಗ ಶಾಸಕ ವೇದವ್ಯಾಸ ಕಾಮತ್‌ ಆಕ್ಷೇಸಿ ಮಾತನಾಡಿದರು. ಈ ವಿಚಾರದಲ್ಲಿ ಇಬ್ಬರೊಳಗೆ ಬಿರುಸಿನ ವಾಗ್ವಾದ ನಡೆಯಿತು.

ಕಳೆದ ಎಂಟು ತಿಂಗಳಿನಿಂದ ರಾಜ್ಯದಲ್ಲೆಡೆ ಡಯಾಲಿಸಿಸ್‌ ಯಂತ್ರಗಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 75 ವರ್ಷಗಳಲ್ಲಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಸಮರ್ಪಕ ಬೆಡ್‌ ವ್ಯವಸ್ಥೆಯೇ ಇರಲಿಲ್ಲ. ಕಳೆದ ನಮ್ಮ ಅವಧಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ವೇದವ್ಯಾಸ್‌ ಕಾಮತ್‌ ಹೇಳಿದರು. ಇವರಿಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆಯೇ ಸಚಿವ ದಿನೇಶ್‌ ಗುಂಡೂರಾವ್‌ ಮಧ್ಯ ಪ್ರವೇಶಿಸಿ, ಕೊರೋನಾ ಅವಧಿಯಲ್ಲಿ ಎಲ್ಲ ಕಡೆ ಆರೋಗ್ಯ ಇಲಾಖೆಯಲ್ಲಿ ಡಯಾಲಿಸಿಸ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ಡಯಾಲಿಸಿಸ್‌ ಯಂತ್ರಗಳಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ಹಲವು ಕಾರಣಗಳಿಂದ ತೊಂದರೆ ಆಗಿದ್ದನ್ನು ಸರಿಪಡಿಸಿ ಹೊಸ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಮಸ್ಯೆ ಬಗೆಹರಿಯಲಿದೆ ಎಂದು ವಾಗ್ವಾದಕ್ಕೆ ವಿರಾಮ ಹಾಕಿದರು.