ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳಾದರೂ ಮುಗಿಯದೆ ತೆವಳುತ್ತಿದೆ. ಹಲವೆಡೆ ಆಗಿರುವ ಕಾಮಗಾರಿಯಲ್ಲೂ ಗುತ್ತಿಗೆದಾರರು ಗುಣಮಟ್ಟ ಕಾಪಾಡಿಲ್ಲ ಎನ್ನುವ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.ಕಳೆದ ಎರಡು ವರ್ಷಗಳ ಹಿಂದೆ ಅಂದಿನ ಶಾಸಕ ಎ.ಟಿ. ರಾಮಸ್ವಾಮಿ ಅವರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಇದುವರೆಗೂ ಕಾಮಗಾರಿ ವೇಗ ಪಡೆದುಕೊಳ್ಳದೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಅಲ್ಲಲ್ಲಿ ಅಪೂರ್ಣಗೊಂಡಿದೆ.285 ಕೋಟಿ ರುಪಾಯಿ ವೆಚ್ಚದಲ್ಲಿ ತಾಲೂಕಿನ 36 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ. 50ರಷ್ಟು ಅನುದಾನ ನೀಡುತ್ತಿವೆ. ಸರ್ಕಾರದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆ ಕಾಮಗಾರಿ ತಾಲೂಕಿನಲ್ಲಿ ಕುಂಟುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿ ಮುಗಿಸದೆ ನಿರ್ಲಕ್ಷಿಸಲಾಗಿದೆ.ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ 309 ಕಾಮಗಾರಿಗಳಿದ್ದು ಪೈಪ್ಲೈನ್ ಅಳವಡಿಸಿ ಟ್ಯಾಂಕ್ ನಿರ್ಮಿಸಿ ಬೋರ್ವೆಲ್ ಸಂಪರ್ಕ ಕಲ್ಪಿಸಬೇಕಿದೆ. 265 ಟ್ಯಾಂಕ್ಗಳನ್ನು ಸ್ಥಾಪಿಸಬೇಕಿದ್ದು, 190 ಟ್ಯಾಂಕ್ಗಳು ಕಾಮಗಾರಿ ಆಗಿದೆ. 35 ಟ್ಯಾಂಕ್ಗಳ ಕಾಮಗಾರಿ ಆಗಬೇಕಿದೆ. ಕಟ್ಟೇಪುರ ಸೇರಿದಂತೆ ಹಲವಾರು ಗ್ರಾಪಂ ವ್ಯಾಪ್ತಿಯಲ್ಲಿ ಶೇ. 50ರಷ್ಟು ಕಾಮಗಾರಿ ನಡೆದಿಲ್ಲ. ಕೆಲವೆಡೆ ಪೈಪ್ಲೈನ್ ಅಳವಡಿಸಿದ್ದು ಕೊಳವೆ ಬಾವಿ ಕೊರೆದು ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಕಾಮಗಾರಿ ಆಗಿರುವ ಸಾಕಷ್ಟು ಹಳ್ಳಿಗಳಲ್ಲಿ ನಲ್ಲಿಗೆ ನೀರು ಹತ್ತುತ್ತಿಲ್ಲ ಎಂದು ಗ್ರಾಮಸ್ಥರು ನಲ್ಲಿಗಳಿಗೆ ಅಳವಡಿಸಿರುವ ಪೈಪುಗಳನ್ನು ಒಡೆದು ಹಾಕಿದ್ದಾರೆ. ಪೈಪ್ ಒಡೆದು ನೀರು ಪೋಲಾಗುತ್ತಿದ್ದ ಗ್ರಾಮಗಳಲ್ಲಿ ಮರು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಗ್ರಾಪಂ ಸದಸ್ಯ ಸಂತೋಷ್ ಮಾತನಾಡಿ, ಸಂತೆಮರೂರು ಗ್ರಾಪಂ ವ್ಯಾಪ್ತಿಯ ಶಣವಿನಕುಪ್ಪೆ ಗ್ರಾಮದಲ್ಲಿ ಪೈಪ್ಲೈನ್ ಕಾಮಗಾರಿ ಅಪೂರ್ಣಗೊಂಡಿದ್ದು ಕೆಲವು ಬೀದಿಗಳಲ್ಲಿ ಕಾಮಗಾರಿ ಮುಗಿಸಲಾಗಿದೆ. ಹಳೆಯ ಪೈಪ್ಲೈನ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದ್ದು ಹೊಸ ಪೈಪ್ಲೈನ್ ಸಂಪರ್ಕ ಕಲ್ಪಿಸದೆ ನಿರ್ಲಕ್ಷಿಸಲಾಗಿದೆ.
=========* ಹೇಳಿಕೆ 1
ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅಧ್ವಾನವಾಗಿದೆ. ಕೆಲವು ಕಡೆ ಕಾಮಗಾರಿಯೇ ಆಗಿಲ್ಲ. ಕೆಲವೆಡೆ ಪೈಪ್ಲೈನ್ ಅಳವಡಿಸಿದ್ದು ನೀರಿನ ಸಂಪರ್ಕ ಕಲ್ಪಿಸಿಲ್ಲ. ಕಾಮಗಾರಿ ಅಪೂರ್ಣವಾಗಿರುವ ಸ್ಥಳಗಳಲ್ಲಿ ಗುತ್ತಿಗೆದಾರರಿಗೆ ನೋಟಿಸ್ ನೀಡಿ ತುರ್ತು ಕ್ರಮ ವಹಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಯೋಜನೆ ಜಾರಿಯಾಗೊಳಿಸಿ ಶುದ್ಧ ನೀರು ನೀಡಬೇಕು. ಈ ಕುರಿತು ಎಂಜಿನಿಯರ್ ಮತ್ತು ಕ್ಷೇತ್ರದ ಜನಪ್ರತಿನಿಧಿ ಗಮನ ಹರಿಸಬೇಕು ಎನ್ನುತ್ತಾರೆ ಕಳ್ಳಿಮುದ್ದನಹಳ್ಳಿ ಲೋಕೇಶ್.* ಹೇಳಿಕೆ 2
ಕುಡಿಯುವ ನೀರಿನ ಮಹತ್ವಾಕಾಂಕ್ಷೆಯ ಯೋಜನೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ಮದಲಾಪುರ ಗ್ರಾಮದಲ್ಲಿ ಗುತ್ತಿಗೆದಾರ ಡಿಪಿಆರ್ ಮಾರ್ಗಸೂಚಿಯಂತೆ ಕಾಮಗಾರಿ ಮುಗಿಸದೆ ಕಳಪೆ ಕಾಮಗಾರಿ ನಡೆಸಲಾಗಿದೆ. ಕೆಲವು ಮನೆಗಳಿಗೆ ನಲ್ಲಿ ಸಂಪರ್ಕವನ್ನು ರಸ್ತೆ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಗುತ್ತಿಗೆದಾರ ಕಾಮಗಾರಿ ಗುಣಮಟ್ಟ ಕಾಪಾಡುವಂತೆ ಇಂಜಿನಿಯರ್ ಸೂಕ್ತ ಕ್ರಮ ಜರುಗಿಸಬೇಕು.-ಎಂ.ಆರ್. ರಂಗಸ್ವಾಮಿ, ಗ್ರಾಪಂಮಾಜಿ ಅಧ್ಯಕ್ಷ ಮಲ್ಲಿಪಟ್ಟಣ (28ಎಚ್ಎಸ್ಎನ್3ಎ )