ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ
ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ 8ನೇ ತರಗತಿ ವಿದ್ಯಾರ್ಥಿ ಜನನ್ ಮಿತ್ತಡ್ಕ ಅವರು 84,246 ಸಂಖ್ಯೆಗಳಲ್ಲಿ ಭಗವದ್ಗೀತೆಯ 700 ಶ್ಲೋಕಗಳನ್ನು 1,400 ಸಾಲುಗಳಲ್ಲಿ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಾಣ ಮಾಡಿದ್ದಾರೆ.
ಹರಿಯಾಣದ ಫರೀದಾಬಾದ್ನಲ್ಲಿರುವ ಐಬಿಆರ್ ಸಂಸ್ಥೆಯವರು ಈ ಸಂಖ್ಯಾಚಿತ್ರ ಗಮನಿಸಿ ಇದೊಂದು ವಿಶೇಷ ಸಾಧ್ಯತೆ ಎಂದು ಪರಿಗಣಿಸಿ ವಿಶ್ವದಾಖಲೆ ಪ್ರಶಸ್ತಿಯನ್ನು ಘೋಷಿಸಿದ್ದಾರೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮತ್ತೊಂದು ವಿಶ್ವದಾಖಲೆಗೆ ಸಿದ್ಧತೆ:ಜನನ್ ಈಗಾಗಲೇ ಒಂದೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲಬಸ್ ಪೋರ್ಶನ್ ಮುಗಿಸಿಕೊಂಡು ಆರು ವಿಷಯಗಳ ಪೂರ್ಣ ಪಠ್ಯ ವಿಷಯಗಳನ್ನು ಚಿತ್ರದ ಮೂಲಕ ತನ್ನ ಅಂಗಿ, ಪ್ಯಾಂಟ್ನಲ್ಲಿ ಬರೆದು ಮತ್ತೊಂದು ವಿಶ್ವ ದಾಖಲೆ ಮಾಡಲು ಸಿದ್ಧನಾಗಿದ್ದಾನೆ ಎಂದವರು ತಿಳಿಸಿದರು.
ದೇಶದ 784 ಜಿಲ್ಲೆಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುವ ಜನನ್ ಮೂರು ರಬ್ಬರ್ ಬಾಲ್ಗಳನ್ನು ಜಗ್ಲಿಂಗ್ ಮಾಡುತ್ತಾ ನಿರರ್ಗಳವಾಗಿ ಹೇಳುವ ಅಭ್ಯಾಸ ಮಾಡುತ್ತಿದ್ದಾನೆ. ಸಂಗೀತ, ಚಿತ್ರಕಲೆ, ಬೀಟ್ ಬಾಕ್ಸ್, ಮಿಮಿಕ್ರಿ, ಸ್ವರೂಪ ಸಂಕೇತ ಭಾಷೆಗಳು, ತ್ರಯೋದಶ ಅವಧಾನ ಪ್ರದರ್ಶನ ಕಲೆಗಳಲ್ಲಿ ಸಾಧನೆ ಮಾಡಿದ್ದಾನೆ ಎಂದು ಗೋಪಾಡ್ಕರ್ ಹೇಳಿದರು.
ಈ ಸಂದರ್ಭ ಮಾತನಾಡಿದ ಜನನ್, ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗುವುದು ನನ್ನ ಕನಸು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ ಎಂದರು.ಪ್ರತಿ ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಅನಾವರಣಗೊಳಿಸುವ ಸ್ವರೂಪ ಅಧ್ಯಯನ ಕೇಂದ್ರದ ಶಿಕ್ಷಣವನ್ನು ಮುಂದಿನ ವರ್ಷ ದೇಶದಾದ್ಯಂತ ಪರಿಚಯಿಸಲು ಸಿದ್ಧತೆ ನಡೆದಿದೆ ಎಂದು ಗೋಪಾಡ್ಕರ್ ಇದೇ ಸಂದರ್ಭ ಹೇಳಿದರು.