ಕೊಪ್ಪಳ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ನಡುವಿನ ವಾಕ್ಸಮರ ಈಗ ಬೆಂಬಲಿಗರ ಮಟ್ಟದಲ್ಲಿ ಮುಂದುವರಿದಿದೆ. ವಾಲ್ಮೀಕಿ ಸಮಾಜದ ಕೆಲವರು ಶಾಸಕ ಗಾಲಿ ಜನಾರ್ದನ ರೆಡ್ಡಿ ಪರವಾಗಿ ಮತ್ತು ಮತ್ತೆ ಹಲವರು ಶ್ರೀರಾಮುಲು ಪರವಾಗಿ ಬ್ಯಾಟ್ ಬೀಸಿದ್ದಾರೆ.
ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಅವಿನಾಭಾವ ಸಂಬಂಧ ಇಲ್ಲ. ಜನಾರ್ದನ ರೆಡ್ಡಿ ಇಲ್ಲದೆ ಶ್ರೀರಾಮುಲು ಬೆಳೆದಿಲ್ಲ, ಶ್ರೀರಾಮುಲು ಅವರು ಇಲ್ಲದೆ ರೆಡ್ಡಿ ಬೆಳೆದಿಲ್ಲ. ಅವರಿಬ್ಬರ ಮಧ್ಯೆ ಬಂದಿರುವ ಭಿನ್ನಾಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಇತ್ಯರ್ಥ ಮಾಡುತ್ತದೆ. ಇದರಲ್ಲಿ ಅನಗತ್ಯವಾಗಿ ಸಮಾಜವನ್ನು ಎಳೆದು ತರಬೇಡಿ ಎಂದು ಆಗ್ರಹಿಸಿದ್ದಾರೆ.
ಶ್ರೀರಾಮುಲು ಅವರ ಕುರಿತು ರೆಡ್ಡಿ ಅವರು ವೈಯಕ್ತಿಕವಾಗಿ ಮಾತನಾಡಿರಬಹುದು. ಅದು ಅವರಿಬ್ಬರ ನಡುವೆ ಗೊತ್ತಿರುವ ಸಂಗತಿ. ಇಬ್ಬರ ನಡುವೆಯೇ ಇತ್ಯರ್ಥಪಡಿಸಿಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ. ಶ್ರೀರಾಮುಲು ಮತ್ತು ರೆಡ್ಡಿ ನಡುವೆ ಆಗಿರುವುದರಿಂದ ನಾಯಕ ಸಮಾಜಕ್ಕೆ ಸಂಬಂಧ ಇಲ್ಲ. ಅಲ್ಲದೆ ಈ ಹಿಂದೆ ನೂರಾರು ಕೋಟಿ ರುಪಾಯಿ ಹಗರಣದಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು ಸಿಕ್ಕಿಹಾಕಿಕೊಂಡಾಗ ಯಾಕೆ ಸಮಾಜ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.ಮೊಣಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಅವರು ಗೆಲ್ಲಲು ಯಾರು ಕಾರಣ ಎನ್ನುವುದು ಜಗತ್ತಿಗೆ ಗೊತ್ತಿದೆ. ಇಡೀ ಕ್ಷೇತ್ರದ ಉಸ್ತುವಾರಿಯನ್ನು ಜನಾರ್ದನ ರೆಡ್ಡಿ ವಹಿಸಿಕೊಂಡು ಗೆಲ್ಲಿಸಿದ್ದಾರೆ. ಈಗ ಸಂಡೂರು ಉಪ ಚುನಾವಣೆಯ ಕುರಿತು ಬಿಜೆಪಿ ಹೈಕಮಾಂಡ್ ಪ್ರಸ್ತಾಪ ಮಾಡಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಹೀಗಾಗಿ, ಇದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
ಇದು ಕಾಂಗ್ರೆಸ್ ಕುತಂತ್ರ ಇರಬಹುದು. ಕಾಂಗ್ರೆಸ್ನಲ್ಲಿ ಸತೀಶ ಜಾರಕೀಹೊಳಿ ಅವರು ಸಿಎಂ ಅಭ್ಯರ್ಥಿಯಾಗುತ್ತಾರೆ ಎನ್ನುವ ಕಾರಣಕ್ಕಾಗಿಯೇ ಈ ರೀತಿಯ ಕುತಂತ್ರ ಮಾಡಿರಬಹುದು ಎಂದು ಆರೋಪಿಸಿದರು.
ಶ್ರೀರಾಮುಲು ಅವಮಾನಿಸಿದರೆ ಸಹಿಸುವುದಿಲ್ಲ: ಹಿಂದುಳಿದ ಸಮಾಜದ ನಾಯಕ ಹಾಗೂ ವಾಲ್ಮೀಕ ಸಮಾಜ ನೇತಾರ ಶ್ರೀರಾಮುಲು ಅವರನ್ನು ಬಿಜೆಪಿ ಸೇರಿದಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪಮಾನ ಮಾಡಿರುವುದನ್ನು ಸಮಾಜ ಸಹಿಸುವುದಿಲ್ಲ. ರೆಡ್ಡಿ ಅವರು ಕೂಡಲೇ ಕ್ಷಮೆ ಕೇಳಬೇಕೆಂದು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧೆ ಮಾಡಲು ಬಿಜೆಪಿಗೆ ಶ್ರೀರಾಮುಲು ಅವರೇ ಬೇಕಾಗಿತ್ತು. ಆಗ ಬಿಜೆಪಿಯಲ್ಲಿ ಯಾರು ಗಂಡಸರು ಇರಲಿಲ್ಲವೇ ಎಂದು ಕಿಡಿಕಾರಿದರು.
ಶ್ರೀರಾಮುಲು ಅವರೊಬ್ಬ ನಾಯಕರಾಗಿದ್ದು, ಅವರನ್ನು ಯಾರೂ ಬೆಳೆಸುವ ಅಗತ್ಯವಿಲ್ಲ. ಇದನ್ನು ರೆಡ್ಡಿ ಅರ್ಥ ಮಾಡಿಕೊಳ್ಳಬೇಕು ಮತ್ತು ಕೂಡಲೇ ಕ್ಷಮಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.