ಕನ್ನಡಪ್ರಭ ವಾರ್ತೆ ಕಲಬುರಗಿ
ಜನಸ್ಪಂದನ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಅರ್ಜಿ ಹಿಡಿದು ಬಂದಿದ್ದರು. ಪ್ರತಿಯೊಬ್ಬರ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಶಾಂತ ಚಿತ್ತರಾಗಿ, ತಾಳ್ಮೆಯಿಂದ ಆಲಿಸಿದರು.
ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗೆ ಆರಂಭವಾದ ಸಾರ್ವಜನಿಕ ಸಮಸ್ಯೆ ಆಲಿಕೆ ಪ್ರಕ್ರಿಯೆ ಸಂಜೆ 5ರ ವರೆಗೆ ನಿರಂತರ ನಡೆಯಿತು. ಬಂದಂತಹ ಎಲ್ಲಾ ಜನರ ಅಹವಾಲು ಆಲಿಸಿಯೇ ಸಚಿವರು ವೇದಿಕೆಯಿಂದ ನಿರ್ಗಮಿಸಿದ್ದು ವಿಶೇಷವಾಗಿತ್ತು.ಉದ್ಯೋಗ ಕೊಡಿಸಲು, ಸಾಲ ಮಂಜೂರಾತಿಗೆ, ಪಡಿತರ ವಿತರಣೆ, ಪೋಡಿ ತಿದ್ದುಪಡಿ, ವೇತನ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಹೀಗೆ ನಾನಾ ತರಹದ ಸಮಸ್ಯೆಗಳು ಕೇಳಿ ಬಂದವು. ಸ್ಥಳದಲ್ಲಿಯೇ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಜನಸ್ಪಂದನ ಸಭೆಯಲ್ಲಿ ಬಂದ ಅರ್ಜಿಗಳನ್ನು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.
ಪಡಿತರ ಕಾರ್ಡ್ ವಿತರಣೆಯಾಗಿಲ್ಲ ಎಂಬ ಸಾರ್ವಜನಿಕರೊಬ್ಬರ ಅಹವಾಲಿಗೆ ಸ್ಪಂದಿಸಿದ ಸಚಿವರು, ಇಂದಿಲ್ಲಿ ಪಡಿತರ ಕಾರ್ಡ್ ಸಮಸ್ಯೆ ಹೊತ್ತಿ ಬಂದವರಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆ ಕೊಡಿಸಿ: ತನಗೆ ಆರು ಜನ ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ತಾನು ಸೇರಿದಂತೆ ಮಕ್ಕಳೆಲ್ಲ ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ ಎಂದು ಅಳುತ್ತಾ ನಾಗನಹಳ್ಳಿಯ ಕಾರ್ಮಿಕ ಮಹಿಳೆ ಪಾರ್ವತಿ ಮನವಿ ಮಾಡಿಕೊಂಡರು. ಸಚಿವರು ಇದಕ್ಕೆ ಸ್ಪಂದಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಗೌಡ ಹಳಿಮನಿ ಅವರಿಗೆ ಅರ್ಜಿಯನ್ನು ಸೂಕ್ತವಾಗಿ ಪರಿಗಣಿಸುವಂತೆ ಸೂಚಿಸಿದರು.
ಸಚಿವ ದಿನೇಶ ಗುಂಡೂರಾವ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಅಪಜಲ್ಫುರ ಶಾಸಕ ಎಂ.ವೈ.ಪಾಟೀಲ, ಎಂ.ಎಲ್.ಸಿ.ತಿಪ್ಪಣ್ಣಪ್ಪ ಕಮಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಅಲಮ್ ಖಾನ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ ಅಕ್ಷಯ್ ಎಂ. ಹಾಕೆ, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿಸಿಎಫ್ ಸುಮಿತ್ ಪಾಟೀಲ ದೇವಿದಾಸ್ ಸೇರಿದಂತೆ ಅನೇಕ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.ಜನರ ಸಮಸ್ಯೆಗಳಿಗೆ ಕಿವಿಯಾಗಬೇಕೆಂದೆ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಲಾಗುತ್ತಿದೆ. ಇಲ್ಲಿ ಸ್ವೀಕರಿಸಲಾದ ಸಮಸ್ಯೆಗಳನ್ನೆಲ್ಲ ಸಂಬಂಧಪಟ್ಟಂತಹ ಇಲಾಖೆಗೆ ರವಾನಿಸಿ ತಕ್ಷಣ ಪರಿಹಾರಕ್ಕೆ ಸೂಚಿಸಲಾಗಿದೆ. ಸ್ಥಳದಲ್ಲಿಯೂ ನೂರಾರು ಸಮಸ್ಯೆ ಪರಿಹರಿಸಲಾಗಿದೆ. ಜನ ನಿರಾಳರಾಗಿ ಬದುಕು ಕಟ್ಟಬೇಕು ಎಂಬುದೇ ನಮ್ಮ ಆಶಯ.