ಕುಷ್ಟಗಿ ಜನಸ್ಪಂದನ ಸಭೆಯಲ್ಲಿ ದೂರಿನ ಸುರಿಮಳೆ

KannadaprabhaNewsNetwork |  
Published : Jan 20, 2026, 02:45 AM IST
ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜನಸ್ಪಂದನ ಸಭೆ ನಡೆಯಿತು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತದಿಂದ ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ನಾಗರಿಕರು ದೂರಿನ ಅಹವಾಲು ಸಲ್ಲಿಸಿದರು.

ಕುಷ್ಟಗಿ: ತಾಲೂಕಿನ ನಾಗರಿಕರ ಸಮಸ್ಯೆಗಳ ಇತ್ಯರ್ಥಪಡಿಸಲು ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ ಜನಸ್ಪಂದನ ಸಭೆಯಲ್ಲಿ ನಾಗರಿಕರು ದೂರಿನ ಅಹವಾಲು ಸಲ್ಲಿಸಿ, ಅಧಿಕಾರಿಗಳ ವಿರುದ್ಧ ದೂರಿನ ಮಳೆ ಸುರಿಸಿದರು.

ಸ್ಮಶಾನ ಮಂಜೂರು ಮಾಡುವುದು, ಪಹಣಿ ತಿದ್ದುಪಡಿ, ಮಾಸಾಶನ ಮಂಜೂರು, ಗ್ರಾಮಗಳ ಸ್ವಚ್ಛತೆ ಕೈಗೊಳ್ಳುವುದು, ರಸ್ತೆ ನಿರ್ಮಾಣ, ಶಾಲಾ ಕಟ್ಟಡ ನಿರ್ಮಾಣ ಮಾಡುವುದು, ಶಾಲೆಗೆ ಭೂಮಿ ಮಂಜೂರಾತಿ ಮಾಡುವುದು, ವಿದ್ಯುತ್ ಸಂಬಂದಿಸಿದ ಸಮಸ್ಯೆಗಳು, ಶಿಕ್ಷಕರ ಸಮಸ್ಯೆಗಳು, ಅತಿಥಿ ಶಿಕ್ಷಕರ ವೇತನ ಪಾವತಿಯಾಗದೆ ಇರುವುದು, ಭೂಸ್ವಾಧೀನ ಪರಿಹಾರ, ರೈಲ್ವೆ ಕಾಮಗಾರಿ ತ್ವರಿತಗೊಳಿಸುವುದು, ಮನೆ ನಿರ್ಮಾಣಕ್ಕಾಗಿ ಎನ್‌ಒಸಿ ಕೊಡುವುದು, ತೆರಿಗೆ ಪಾವತಿ ಮಾಡುವುದು, ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಸಿಬ್ಬಂದಿಯಿಂದ ಹಣ ವಸೂಲಿ, ವಿಂಡ್ ಪವರ ಕಂಪನಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು, ಪತ್ರಕರ್ತರ ಭವನಕ್ಕೆ ನಿವೇಶನ ಹಾಗೂ ಪತ್ರಕರ್ತರಿಗೆ ನಿವೇಶನ ಒದಗಿಸುವುದು, ರದ್ದಾಗಿರುವ ಪಡಿತರ ಕಾರ್ಡಗಳನ್ನು ಸರಿಪಡಿಸುವ ಕುರಿತು, ಸಾರಿಗೆ ಸಮಸ್ಯೆ, ಬಸ್ ನಿಲ್ದಾಣ ನಿರ್ಮಾಣ, ಸೇರಿದಂತೆ ಅನೇಕ ದೂರು- ಅಹವಾಲುಗಳು ಸಲ್ಲಿಕೆಯಾದವು. ಗ್ರಾಮದ ಹಲವು ಸಮಸ್ಯೆಗಳ ಕುರಿತು ಜನರು ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಗಮನಕ್ಕೆ ತಂದರು.

ಖುದ್ದು ಸಮಸ್ಯೆ ಆಲಿಸಿದರು: ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಪ್ರತಿಯೊಬ್ಬರ ಸಮಸ್ಯೆ ಆಲಿಸಿ, ಬಗೆಹರಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೀಘ್ರದಲ್ಲಿ ಪರಿಹಾರವಾಗದ ಅರ್ಜಿಗಳಿಗೆ 15 ದಿನ ಕಾಲವಕಾಶ ನೀಡಿದರು. ಒಟ್ಟು 200ಕ್ಕೂ ಅಧಿಕ ಅಹವಾಲು ಅರ್ಜಿಗಳು ಸ್ವೀಕೃತಗೊಂಡವು.

ಅಹವಾಲು ನೋಂದಣಿ: ಅಹವಾಲು ಸ್ವೀಕರಿಸುವ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಿತು. ನೋಂದಣಿಗೆ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಗ್ರಾಮಸ್ಥರು ಸಾಲಾಗಿ ಬಂದು ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದರು. ಆನಂತರ ಅಹವಾಲು ಅರ್ಜಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಆನ್‌ಲೈನ್ ಪೋರ್ಟಲ್‌ ಮೂಲಕ ಅಪ್‌ಲೋಡ್‌ ಮಾಡಿದರು.

ಮಳಿಗೆಗಳ ಉದ್ಘಾಟನೆ: ಜನಸ್ಪಂದನ ಸಭೆಗೆ ಆಗಮಿಸುವ ನಾಗರಿಕರಿಗೆ ಸರ್ಕಾರಿ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಸೇರಿದಂತೆ ವಿವಿಧ ಇಲಾಖೆಯವರು ಮಾಹಿತಿ ಮಳಿಗೆಗಳನ್ನು ತೆರೆಯಲಾಗಿತ್ತು. ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಆರೋಗ್ಯ ಇಲಾಖೆ ಮಳಿಗೆಯಲ್ಲಿ ಶಾಸಕರು ಬಿಪಿಯನ್ನು ಪರೀಕ್ಷೆ ಮಾಡಲಾಯಿತು. ಆನಂತರ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ದೌಡ್ಡನಗೌಡ ಪಾಟೀಲ್ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ