ಕನ್ನಡಪ್ರಭ ವಾರ್ತೆ ಶೃಂಗೇರಿ
ಪಟ್ಟಣದಲ್ಲಿ ವರ್ತಕರು ಅಂಗಡಿ ಹೋಟೇಲುಗಳನ್ನು ಕೆಲಹೊತ್ತು ಬಂದ್ ಮಾಡಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು,ಬೆಳಿಗ್ಗೆ ಪಟ್ಟಣ ಪಂಚಾಯಿುತಿ ಮುಂಬಾಗದಿಂದ ಹೊರಟ ಬೃಹತ್ ಪ್ರತಿಭಟನೆ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಎದರು ಸಮಾವೇಶಗೊಂಡಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಬ್ರಾಹ್ಮಣ ಮಹಾ ಸಭಾದ ಜಿ.ಎಂ.ಸತೀಶ್ ಬ್ರಾಹ್ಮಣ ಸಮುದಾಯದ ವಿರುದ್ದ ಧ್ವೇಷ ಹರಡುವ ಕೆಲಸ ಮಾಡಲಾಗುತ್ತಿದೆ.ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.ಪ್ರಗತಿ ಪರ,ಎಡಪಂಥೀಯ ಹೆಸರಲ್ಲಿ ಜನರಲ್ಲಿ ಧ್ವೇಷ ಮನೋಭಾವನೆ ಬಿತ್ತುವ ಕೆಲಸ ಮಾಡಲಾಗುತ್ತಿದೆ,ಜನಿವಾರ ತೆಗೆಸಿದರೆ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುತ್ತದೆ ಎಂಬ ವಿಕೃತ ಆನಂದ ಪಡುವ ಜನರಿಂದ ಇಂತಹ ಕೆಲಸ ನಡೆಯುತ್ತಿದೆ.ಜನಿವಾರವನ್ನು ಕೇವಲ ಬ್ರಾಹ್ಮಣ ಸಮುದಾಯ ಮಾತ್ರ ಧರಿಸುವುದಿಲ್ಲ.ಅನೇಕ ಸಮುದಾಯಗಳಿವೆ.ಬ್ರಾಹ್ಮಣ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಬ್ರಾಹ್ಮಣ ದ್ವೇಷಿ,ವಿಷ ಬೀಜ ಬಿತ್ತುವ ಕೆಲಸ ಬಿಡಬೇಕು.ಹಿಂದೂ ಧರ್ಮ ಸಂಸ್ಕ್ರತಿ,ಸಂಸ್ಕಾರಗಳ ಜತೆ ಚೆಲ್ಲಾಟವಾಡುವ ಕೆಲಸ ಬೇಡ.ಕಾನೂನು ರೂಪಿಸಬೇಕು.ಇಂತಹ ನಿಯಮಗಳನ್ನು ಕೈಬಿಡಬೇಕು ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಮಾತನಾಡಿ, ಬ್ರಾಹ್ಮಣರು ಹೇಡಿಗಳಲ್ಲ.ಯಾರಿಗೂ ಅನ್ಯಾಯ ಮಾಡಿದವರಲ್ಲ.ಸಮಾಜದ ಎಲ್ಲಾ ವರ್ಗದವರಿಗೂ ಬೇಕಾದ ಸಮುದಾಯ.ಆದರೆ ಜನಿವಾರ,ಸಂಸ್ಕಾರದ ವಿಷಯದಲ್ಲಿ ಇಂದು ಬೀದಿಗಿಳಿದಿರುವುದು ವಿಪರ್ಯಾಸ.ವಸ್ತ್ರ ಸಂಹಿತೆ ಹೆಸರಲ್ಲಿ ಬ್ರಾಹ್ಮಣ ಜನಾಂಗದ ಅಭ್ಯರ್ಥಿಗಳ ಜನಿವಾರ ಕತ್ತರಿಯಲ್ಲಿ ಕಟ್ ಮಾಡಿ ತೆಗೆದಿರುವುದು ಖಂಡನೀಯ ಎಂದರು.
ಕಾಂಗ್ರೇಸ್ ಮುಖಂಡ ಕೆ.ಎಂ.ರಮೇಶ್ ಭಟ್, ಜಯಶ್ರೀ ಗಣೇಶ್, ವಿಜಯರಂಗ ಗುಡ್ಡೇತೋಟ, ಅಂಬಳೂರು ರಾಮಕೃಷ್ಣ, ತಲಗಾರು ಉಮೇಶ್ ಮತ್ತಿತರರು ಮಾತನಾಡಿದರು.