ವಿಜಯಪುರ: ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವ ಅದ್ಧೂರಿ ರಥ ಎಳೆಯುವುದರ ಮೂಲಕ ಸಂಪನ್ನಗೊಂಡಿತು. ನಗರದ ಉಕ್ಕಲಿ ರಸ್ತೆಯಲ್ಲಿನ ಜಯಶಾಂತಲಿಂಗೇಶ್ವರ ಬೃಹನ್ಮಠ, ವಿಶ್ವಶಾಂತಿ ಪೀಠದಲ್ಲಿ ಫೆ.22 ರಿಂದ ಫೆ.25ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರವಚನ, ಉಪನ್ಯಾಸ ಗೋಷ್ಠಿಗಳು ಸೇರಿದಂತೆ ಅನೇಕ ಧಾರ್ಮಿಕ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಫೆ.25 ರಂದು ಬೆಳಿಗ್ಗೆ 7 ಗಂಟೆಗೆ ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳಿಂದ ಇಷ್ಟಲಿಂಗ ಪೂಜೆ, 7.30ಕ್ಕೆ ವೇದಮೂರ್ತಿ ಪಂಡಿತ ಶಿವಯೋಗಿ ಶರ್ಮಾ ಹಾಗೂ ವೃಂದದಿಂದ ಮಹಾರುದ್ರಯಜ್ಞ ನಡೆಯಿತು. ಬೆಳಿಗ್ಗೆ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ದೀಕ್ಷೆ, 10ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾರುದ್ರ ಯಜ್ಞದ ಪೂರ್ಣಾಹುತಿ, ಶಿವಾನುಭವಗೋಷ್ಠಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು ನಡೆಸಲಾಯಿತು.