ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿದ್ಯಾರ್ಥಿ ನಿಲಯದ ಪರಿಕಲ್ಪನೆ ನೀಡಿದ್ದೆ ಜಯದೇವ ಶ್ರೀಗಳು

KannadaprabhaNewsNetwork | Published : Mar 4, 2025 12:36 AM

ದಾನ, ಧರ್ಮ, ಪರೋಪಕಾರ ಮಾಡುವುದು ಪುಣ್ಯದ ಕೆಲಸವಾಗಿದ್ದು ಬಡವರನ್ನು, ಬಿದ್ದ ಜನರನ್ನು ಮೇಲಕ್ಕೆತ್ತಿ ಬೆಳೆಸುವುದೇ ನಿಜವಾದ ಧರ್ಮ ಅಂತಹ ಕೆಲಸಗಳನ್ನು ಮಾಡಿದ ಜಯದೇವ ಜಗದ್ಗುರುಗಳು ನಿಜವಾದ ಧರ್ಮಾತ್ಮರು ಎಂದು ನಗರದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ದಾನ, ಧರ್ಮ, ಪರೋಪಕಾರ ಮಾಡುವುದು ಪುಣ್ಯದ ಕೆಲಸವಾಗಿದ್ದು ಬಡವರನ್ನು, ಬಿದ್ದ ಜನರನ್ನು ಮೇಲಕ್ಕೆತ್ತಿ ಬೆಳೆಸುವುದೇ ನಿಜವಾದ ಧರ್ಮ ಅಂತಹ ಕೆಲಸಗಳನ್ನು ಮಾಡಿದ ಜಯದೇವ ಜಗದ್ಗುರುಗಳು ನಿಜವಾದ ಧರ್ಮಾತ್ಮರು ಎಂದು ನಗರದ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು. ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ನಡೆದ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳ 75ನೇ ವರ್ಷದ ಪುಣ್ಯಸ್ಮರಣೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿ ನಿಲಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದವರು ಯಾರಾದರೂ ಇದ್ದರೆ ಅದು ಚಿತ್ರದುರ್ಗದ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಮಾತ್ರ. ದೇಶದಾದ್ಯಂತ ಸಂಚರಿಸಿ, ವಿದ್ಯಾ ಕೇಂದ್ರಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಶ್ರೀಗಳು ಇತಿಹಾಸ ಬರೆದರು. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸಮಾಜ ಕಟ್ಟಿದರು ಎಂದು ಶ್ರೀಗಳವರ ಸಾಧನೆಯನ್ನು ತಿಳಿಸಿದರು. ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪ್ರಕಾಂಡ ವಿದ್ವಾಂಸರಾಗಿದ್ದ ಜಯದೇವ ಜಗದ್ಗುರುಗಳು ನಾಡಿನೆಲ್ಲೆಡೆ ಮಠಗಳನ್ನು ಕಟ್ಟಿ ಮಠ ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ಮನುಷ್ಯನಿಗೆ ಬೇಕಾದ ವಿದ್ಯೆಗೆ ಮಹತ್ವ ನೀಡಿದರು. ಅವರು ಸಂಚರಿಸಿದ ಎಲ್ಲ ಕಡೆಗಳಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟಲ್‌ಗಳ ನಿರ್ಮಾಣ ಮಾಡಿ ಮಾಹಾರಾಜರ ಪ್ರಶಂಸೆಗೆ ಪಾತ್ರರಾಗಿದ್ದರು ಎಂದು ಪ್ರಸಂಶಿಸಿದರು. ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ವೀರಶೈವ ಸಮುದಾಯದಲ್ಲಿ ಕೇವಲ ತಮ್ಮ ಸಮುದಾಯವನ್ನಷ್ಟೇ ಅಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುವುದು, ಎಲ್ಲರನ್ನೂ ಒಟ್ಟಿಗೆ ಕರೆಗೊಯ್ಯುವುದು ಆಗಿದೆ. ಸಮಾಜದ ಜನರಿಗೆ ಜ್ಞಾನ, ಅಕ್ಷರ, ಅರಿವು, ಆಶ್ರಯ, ಸಮಾನತೆ ನೀಡುವುದೇ ಜಂಗಮರ ಧ್ಯೇಯ. ಲಿಂಗದೀಕ್ಷೆ ಸಮುದಾಯಕ್ಕೆ ಮಾತ್ರವಲ್ಲ ಎಲ್ಲರಿಗೂ ಸಾಮಾಜಿಕವಾಗಿ ಸಮಾನತೆಯಿಂದ ಬೆಳೆಯುವುದೇ ಸಮಾಜದ ಧ್ಯೇಯವಾಗಿದೆ. ಸಮುದಾಯದಲ್ಲಿ ಈಗ ಸಮೃದ್ಧಿ ಇದೆ ಆದರೆ ಜ್ಞಾನದ, ಸಂಸ್ಕೃತಿಯ ಕೊರತೆ ಎದ್ದುಕಾಣುತ್ತಿದ್ದು ಆಲಿಸಿ ಪಾಲಿಸಿದರಷ್ಟೇ ಧರ್ಮದ ಬೆಳವಣಿಗೆ ಸಾಧ್ಯ ಎಂದರು. ಖ್ಯಾತ ಇತಿಹಾಸ ತಜ್ಞ, ಸಂಶೋಧಕ ಹಾಗೂ ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶಪ್ಪ ಉಪನ್ಯಾಸ ನೀಡಿ, ವೀರಶೈವರು ಬಹುಸಂಖ್ಯಾತರಾಗಿರುವ ಇಲ್ಲಿಯೇ ಇಂತಹ ಕಾರ್ಯಕ್ರಮಕ್ಕೆ ಜನರ ಕೊರೆತೆ ಇದೆ. ಎಲ್ಲರೂ ಸೇರಿ ಈ ಕಾರ್ಯಕ್ರಮ ಆಚರಿಸಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದರು. ಅಕ್ಕಮಹಾದೇವಿ ಸಮಾಜದ ವತಿಯಿಂದ ವಚನಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ವೀರಶೈವಾನಂದಾಶ್ರಮದ ಉಪಾಧ್ಯಕ್ಷ ಗುರುಬಸಪ್ಪ, ಟ್ರಸ್ಟಿ ಪರಮಶಿವಯ್ಯ, ಜಿ.ಕೆ. ನಟರಾಜು, ಕಾರ್ಯದರ್ಶಿಗಳಾದ ಜಿ.ಎಸ್.ಉಮೇಶ್, ಹೆಚ್.ಲೋಕೇಶ್, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ನಿಖಿಲ್, ಸೇರಿದಂತೆ ವೀರಶೈವ ಸಮಾಜದ ಬಂಧುಗಳು ಭಾಗವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ಎನ್.ಅಜಯ್ ಸ್ವಾಗತಿಸಿ, ವಕೀಲೆ ಶೋಭಾ ಜಯದೇವ್ ನಿರೂಪಿಸಿ, ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಪಿ.ದೀಪಕ್ ವಂದಿಸಿದರು.