ಜಯಮೃತ್ಯುಂಜಯ ಶ್ರೀ ಪದಚ್ಯುತಿ ಖಂಡನೀಯ: ಅಶೋಕ

KannadaprabhaNewsNetwork |  
Published : Sep 25, 2025, 01:00 AM IST
24ಕೆಡಿವಿಜಿ3-ದಾವಣಗೆರೆಯಲ್ಲಿ ಬುಧವಾರ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಭಕ್ತರು ಮುಖ್ಯವಾಗಿದ್ದಾರೆ. ಇಂತಹ ಶ್ರೀಗಳನ್ನು ಪೀಠದಿಂದ ಪದಚ್ಯುತಗೊಳಿಸಿದ್ದನ್ನು ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ ಹೇಳಿದ್ದಾರೆ.

- ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮೂಲಮಠ, ಶ್ರೀಗಳ ಮಠ ಕಟ್ಟಲು ಚಿಂತನೆ: ಹೇಳಿಕೆ

- - -

- ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ-ಹುಬ್ಬಳ್ಳಿಗಷ್ಟೇ ಸೀಮಿತ

- ಸಿಎಂ ಮಾತುಕೇಳಿ ಸಮಾಜ ಒಡೆಯಲು ಕಾಶೆಪ್ಪನವರ್ ಯತ್ನ

- ಸಮಾಜ ಶ್ರೀಗಳ ಜೊತೆಗಿದೆಯೇ ಹೊರತು, ಟ್ರಸ್ಟ್‌ ಜೊತೆಗೆ ಅಲ್ಲ

- ಕಾಶೆಪ್ಪನವರ ತಕ್ಷಣ ಶ್ರೀಗಳು ಹಾಗೂ ಸಮಾಜದ ಕ್ಷಮೆ ಕೋರಬೇಕು

- ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಿದ್ದರಾಮಯ್ಯಗೆ ಬಕೆಟ್‌ ಹಿಡಿಯುತ್ತಾರೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಭಕ್ತರು ಮುಖ್ಯವಾಗಿದ್ದಾರೆ. ಇಂತಹ ಶ್ರೀಗಳನ್ನು ಪೀಠದಿಂದ ಪದಚ್ಯುತಗೊಳಿಸಿದ್ದನ್ನು ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಟ್ರಸ್ಟಿಗಳು ಮಾಡಿರುವ ಹಗರಣಗಳು ಹೊರಬರಬಾರದೆಂದು ಶ್ರೀಗಳನ್ನೇ ಪದಚ್ಯುತಗೊಳಿಸಿದ್ದಾರೆ. ಇಡೀ ಪಂಚಮಸಾಲಿ ಸಮಾಜ ಶ್ರೀಗಳ ಜೊತೆಗಿದೆಯೇ ಹೊರತು, ಟ್ರಸ್ಟ್‌ ಜೊತೆಗೆ ಅಲ್ಲ ಎಂದರು.

ನೂರು ಮಠಗಳನ್ನು ಕಟ್ಟುವ ಶಕ್ತಿ ನಮ್ಮ ಸಮಾಜಕ್ಕೆ ಇದೆ. ಪಂಚಮಸಾಲಿ ಪೀಠದ ಮಠಾಧಿಪತಿಯಾಗಿ ಶ್ರೀ ಜಯಮೃತ್ಯುಂಜಯ ಸ್ವಾಮಿಗಳೇ ಮುಂದುವರಿಸುತ್ತಾರೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ-ಹುಬ್ಬಳ್ಳಿಗಷ್ಟೇ ಸೀಮಿತ ಎಂದು ಹೇಳಿದರು.

ಸಮಾಜದ ಸ್ವಯಂಘೋಷಿತ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್ ಸಮಯಸಾಧಕತನದ ವ್ಯಕ್ತಿತ್ವ ಹೊಂದಿದ್ದಾರೆ. 2ಎ ಮೀಸಲಾತಿಗಾಗಿ ನಡೆದ ಹೋರಾಟದ ಲೆಕ್ಕಪತ್ರಗಳನ್ನು ಇದುವರೆಗೂ ಸಮಾಜದ ಮುಂದಿಟ್ಟಿಲ್ಲ. ಕಾಶೆಪ್ಪನವರ್ ಈ ಹಿಂದೆ ಶ್ರೀಗಳನ್ನು ಹಾಡಿ ಹೊಗಳುತ್ತಿದ್ದರು. ತಮ್ಮ ಪತ್ನಿಗೆ ಲೋಕಸಭೆ ಚುನಾವಣೆ ಟಿಕೆಟ್‌ ಕೊಡಿಸುವ ಸಲುವಾಗಿ ಇದೇ ಸ್ವಾಮೀಜಿಗಳನ್ನು ದೆಹಲಿಗೆ ಕರೆದೊಯ್ದಿದ್ದನ್ನು ಸಮಾಜ ಇನ್ನೂ ಮರೆತಿಲ್ಲ. ಸಮಾಜವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಶೆಪ್ಪನವರ ತಕ್ಷಣ ಶ್ರೀಗಳು, ಸಮಾಜದ ಕ್ಷಮೆ ಕೋರಬೇಕು. ಸಿಎಂ ಮಾತು ಕೇಳಿ, ಸಮಾಜ ಒಡೆಯಲು ಕಾಶೆಪ್ಪನವರ್ ಹೀಗೆ ವರ್ತಿಸುತ್ತಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿಯುವ ಕೆಲಸ ಕಾಶೆಪ್ಪನವರ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸುವ ಶಕ್ತಿ ಸಮಾಜಕ್ಕಿದೆ. ಕಾಶೆಪ್ಪನವರ್ ಮಾನಸಿಕ ರೋಗಿಯಂತೆ ವರ್ತಿಸುವುದನ್ನು ನಿಲ್ಲಿಸಲಿ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಬಳಿ ಇರುವ 13 ಗುಂಟೆ ಜಾಗದಲ್ಲಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮೂಲ ಮಠವನ್ನು, ಮತ್ತೊಂದೆಡೆ ಇರುವ 12 ಎಕರೆ ಜಾಗದಲ್ಲಿ ಶ್ರೀಗಳ ಮಠ ಕಟ್ಟಲು ಚಿಂತನೆ ನಡೆಸಲಾಗಿದೆ ಎಂದು ಅಶೋಕ ತಿಳಿಸಿದರು.

ಸಮಾಜದ ಮುಖಂಡರಾದ ಮಂಜು ಪೈಲ್ವಾನ್, ಗಿರೀಶ ಮರಡಿ, ಕೊಟ್ರಗೌಡ ಕ್ಯಾರಕಟ್ಟೆ, ಚನ್ನಬಸಪ್ಪ ಚಿಕ್ಕಮೇಗಳಗೆರೆ, ನಾಗರಾಜ ಕೊಳೇನಹಳ್ಳಿ ಇತರರು ಇದ್ದರು.

- - -

-24ಕೆಡಿವಿಜಿ3.ಜೆಪಿಜಿ:

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ