ಕೆ.ಆರ್.ಪೇಟೆ: ಜೆಡಿಎಸ್ ವತಿಯಿಂದ ಬರ ಪರಿಶೀಲನಾ ತಂಡವು ನ.11 ರಂದು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಲಿದೆ ಎಂದು ಶಾಸಕ ಎಚ್ .ಟಿ.ಮಂಜು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದ ಶಾಸಕರ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಜೆಡಿಎಸ್ಸಭೆಯಲ್ಲಿ ನಿರ್ಧಾರವಾಗಿರುವಂತೆ ಜಿಲ್ಲಾ ಜೆಡಿಎಸ್ ನಾಯಕರು ಒಗ್ಗೂಡಿ ಜಿಲ್ಲೆಯಾದ್ಯಂತ ಬರ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿದರು.ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೆಶ್ ಸೇರಿದಂತೆ ಪಕ್ಷದ ಜಿಲ್ಲೆಯ ಎಲ್ಲಾ ಮಾಜಿ ಶಾಸಕರು ಮತ್ತು ಮುಖಂಡರ ನೇತೃತ್ವದ ಬರ ಪರಿಶೀಲನಾ ತಂಡ 2 ದಿನಗಳ ಜಿಲ್ಲಾದ್ಯಂತ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ನ.10 ರಂದು ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಸಂಚರಿಸಲಿದೆ. ನ.11 ರಂದು ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಲಿದೆ. ತಂಡವನ್ನು ತಾಲೂಕಿನ ಸಂತೇಬಾಚಹಳ್ಳಿ ಕ್ರಾಸ್ನ ಗಡಿ ಭಾಗದಲ್ಲಿ ಸ್ವಾಗತಿಸಲಾಗುವುದು. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬರ ಪರಿಶೀಲನಾ ತಂಡವನ್ನು ಸ್ವಾಗತಿಸುವಂತೆ ಮನವಿ ಮಾಡಿದರು.ಬರ ಪರಿಶೀಲನಾ ತಂಡ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಮತ್ತು ಲೋಕನಹಳ್ಳಿ ಕೆರೆಗಳನ್ನು ಪರಿಶೀಲಿಸಲಿದೆ. ಅನಂತರ ಬೂಕನಕೆರೆ ಹೋಬಳಿಯಲ್ಲಿ ತಂಡ ಸಂಚರಿಸಿ ಸಮೀಕ್ಷೆ ನಡೆಸಿ ಪಕ್ಷದ ವರಿಷ್ಠರ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಕಳೆದ ವರ್ಷ ಬಿದ್ದ ತೀವ್ರ ಮಳೆಗೆ ಮಾವಿಕಟ್ಟೆ ಕೊಪ್ಪಲು ಮತ್ತು ಲೋಕನಹಳ್ಳಿ ಕೆರೆಗಳು ಒಡೆದು ಹೋಗಿದ್ದು ಅವುಗಳನ್ನು ಸರಿಪಡಿಸಲಿಲ್ಲ. ಇದರಿಂದಾಗಿ ನೀರು ಹರಿಸಿದರೂ ಈ ಕರೆಗಳಲ್ಲಿ ನೀರು ನಿಲ್ಲದ ಸ್ಥಿತಿಯಿದೆ. ಇದೆಲ್ಲವನ್ನೂ ಪಕ್ಷ ಸರ್ಕಾರದ ಗಮನಕ್ಕೆ ತಂದು ಅಭಿವೃದ್ದಿಗಾಗಿ ಜನಪರ ಹೋರಾಟ ನಡೆಸಲಿದೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದ್ದಾರೆ. ಸಿಎಂ ಅವರ ರೈತ ಪರ ನಿಲುವನ್ನು ನಾನು ಸ್ವಾಗತಿಸುತ್ತೇನೆ. ತಾಲೂಕಿನಾದ್ಯಂತ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದ್ದು, ರಾತ್ರಿ ವೇಳೆ ರೈತರು ನೀರು ಹಾಯಿಸಲು ತಮ್ಮ ಹೊಲಗದ್ದೆಗಳಿಗೆ ಹೋಗಲಾರದ ಸ್ಥಿತಿಯಿದೆ ಎಂದರು.
ರಾತ್ರಿ ವೇಳೆ ವಿದ್ಯುತ್ ಪೂರೈಕೆಯನ್ನು ವಿರೋಧಿಸಿ ಈಗಾಗಲೇ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಕಷ್ಟವನ್ನು ಅರಿತು ಸರ್ಕಾರ ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಸಮತೋಲನ ನೀತಿ ಅನಿವಾರ್ಯವಾದರೆ ಹಗಲು ನಿರಂತರ 5 ಗಂಟೆ ಹಾಗೂ ರಾತ್ರಿ ೨ ಘಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಸಲಹೆ ನೀಡಿದರು.ಸರ್ಕಾರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವಂತೆ ಆಗ್ರಹಿಸಿದರು.
ಸಹಕಾರ ಸಪ್ತಾಹ:ನ.15 ರಂದು ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಸಹಕಾರ ಸಪ್ತಾವನ್ನು ಆಯೋಜಿಸಲಾಗಿದೆ. ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಮತ್ತು ಸಹಕಾರ ಬಂಧುಗಳು ಕಾರ್ಯಕ್ರಮಕ್ಕೆ ಸಹಕರಿಸಿ ಸಹಕಾರ ಸಪ್ತಾಹವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಹೊಸಹೊಳಲು ರಾಜು, ಪುರಸಭಾ ಸದಸ್ಯ ಯೋಗೇಶ್, ಮಾಜಿ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ವಕೀಲ ವಡ್ಡರಹಳ್ಳಿ ಧನಂಜಯ ಸೇರಿದಂತೆ ಹಲವರು ಇದ್ದರು.