ಹಿರಿಯೂರು: ಜಾತ್ಯಾತೀತ ಜನತಾದಳ ಇದೀಗ ಕೋಮುವಾದಿ ಜನತಾದಳವಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲೇವಡಿ ಮಾಡಿದರು.
ಸರ್ಕಾರ ಬಂದು 9 ತಿಂಗಳಾಯಿತು. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವು. ಅನಂತರ ಕೊಟ್ಟ ಮಾತಿನಂತೆ ಎಲ್ಲಾ ಭರವಸೆ ಈಡೇರಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ವಿರೋಧ ಪಕ್ಷದವರು ಗ್ಯಾರಂಟಿ ಜಾರಿ ಮಾಡಲು ಆಗುವುದಿಲ್ಲ ಎಂಬ ಭಾವನೆಯಿಂದ ಟೀಕೆ ಮಾಡಲು ಶುರು ಮಾಡಿದ್ದರು. ಆದರೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇ ತಡ ವಿರೋಧಿಗಳು ಗಪ್ ಚುಪ್ ಆದರು. 15 ಲಕ್ಷ ರು. ಹಾಕುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂಬಂತಹ ಹುಸಿ ಸುಳ್ಳುಗಳನ್ನು ಹೇಳುವುದು ಕಾಂಗ್ರೆಸ್ ಸಿದ್ಧಾಂತವಲ್ಲ. ಇನ್ನು ನಾಲ್ಕು ವರ್ಷದಲ್ಲಿ ರಾಜ್ಯ ಸಂಪೂರ್ಣ ಅಭಿವೃದ್ಧಿಯ ಪಥದಲ್ಲಿ ಇರಲಿದೆ. ಈಗಾಗಲೇ ನಮ್ಮ ತಾಲೂಕಲ್ಲಿ ಗೋ ಶಾಲೆಗಳನ್ನು ತೆರೆಯುತ್ತಿದ್ದೇವೆ. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಭರದಲ್ಲಿ ಸಾಗುತ್ತಿದೆ. ಐಮಂಗಲ ಭಾಗದ 36 ಹಳ್ಳಿಗಳಿಗೆ ಕುಡಿಯುವ ನೀರು ತಲುಪಿವೆ ಎಂದರು.
ಇನ್ನೊಂದು ವರ್ಷದಲ್ಲಿ ಇಡೀ ತಾಲೂಕಿನ ಜನ ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ. ಅಧಿಕಾರ ಜನರ ಸೇವೆ ಮಾಡಲು ಇದೆಯೇ ಹೊರತು ಅಧಿಕಾರದಾಸೆಗೆ ಕೋಮುವಾದಿಗಳ ಜೊತೆ ಕೈಜೋಡಿಸುವುದಕ್ಕಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಅಧಿಕಾರಕ್ಕಾಗಿ ಹೋದವರನ್ನು ಜನ ಕ್ಷಮಿಸಲ್ಲ. 2013ರಿಂದ 2018ರವರೆಗೆ ಸಾವಿರಾರು ದೇವಾಲಯಗಳಿಗೆ ಅನುದಾನ ನೀಡಿದ್ದೆವು. ಆದರೆ ಬಹಳಷ್ಟು ಕೆಲಸ 5 ವರ್ಷ ಹಾಗೇ ಉಳಿದವು. ಇದೀಗ ಮತ್ತೆ ಅನುದಾನ ನೀಡಿ ಅವುಗಳನ್ನು ನಾವೇ ಮುಗಿಸಬೇಕಿದೆ. ಈ ಮೂರೂ ಸಮುದಾಯ ಭವನಗಳನ್ನು ಇನ್ನೊಂದೇ ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ. ಎಲ್ಲಾ ವರ್ಗದ ಜನರ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಆಶೋತ್ತರಗಳನ್ನು ಈಡೇರಿಸಬಲ್ಲುದು ಎಂಬುದನ್ನು ಮರೆಯಬೇಡಿ ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಮೂರೂ ಸಮುದಾಯಗಳನ್ನು ಒಂದೇ ಕಡೆ ಸೇರಿಸುವ ಪರಿಕಲ್ಪನೆ ಈ ಸಭೆಯಲ್ಲಿ ನೆರವೇರಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಖಾದಿ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ನಾಗಕುಮಾರ್, ನಗರಸಭೆ ಸದಸ್ಯ ಬಿಎನ್ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಆರ್.ಶಿವಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಪಿ.ಆರ್.ದಾಸ್, ಶಿವು ಯಾದವ್, ರಂಗಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಎಸ್.ಆರ್.ತಿಪ್ಪೇಸ್ವಾಮಿ, ಮಹಲಿಂಗಪ್ಪ, ಹೇಮಂತ್ ಕುಮಾರ್, ಜಿ.ಎಲ್.ಮೂರ್ತಿ, ಭೂತಾಭೋವಿ, ಜಿ.ಪ್ರೇಮ್ ಕುಮಾರ್, ಕಲ್ಲಟ್ಟಿ ಹರೀಶ್, ಶಿವರಂಜಿನಿ,ನಟೇಶ್, ಸಣ್ಣಪ್ಪ, ಜ್ಞಾನೇಶ್, ಶಿವಕುಮಾರ್, ಗುರುಪ್ರಸಾದ್ ಮುಂತಾದವರು ಹಾಜರಿದ್ದರು.