ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತೀರ್ಥಹಳ್ಳಿ ಪಟ್ಟಣದಲ್ಲಿ ಸೋಮವಾರ ನಡೆದ ತಾಲೂಕು ಜಾತ್ಯತೀತ ಜನತಾದಳದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎರಡನೇ ಬಾರಿಗೆ ತಾಲೂಕು ಅಧ್ಯಕ್ಷರಾಗಿ ಪದವಿ ಸ್ವೀಕರಿಸಿ, ಪಕ್ಷದ ಬೆಂಬಲ ಪಡೆದು ರಾಜಕೀಯ ಕ್ಷೇತ್ರದಲ್ಲಿ ಬೆಳೆದ ಕೆಲವರು ಕೈಕೊಟ್ಟು ಹೋದರು. ಹಿಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅನಾಮಧೇಯ ವ್ಯಕ್ತಿಗೆ ಟಿಕೆಟ್ ನೀಡುವ ವೇಳೆ ಅಧ್ಯಕ್ಷನಾಗಿದ್ದ ನನ್ನ ಗಮನಕ್ಕೂ ತಂದಿರಲಿಲ್ಲ. ತಾಲೂಕು ಕೇಂದ್ರದಲ್ಲಿ ಪಕ್ಷದ ಕಚೇರಿಯನ್ನು ನಡೆಸುವುದಕ್ಕೂ ಅಸಾಧ್ಯವಾಗಿದೆ. ಇಂಥ ಬೆಳವಣಿಗೆಗಳು ಪಕ್ಷದ ಹಿನ್ನೆಡೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಕ್ಷ ಮಹತ್ವದ ಸ್ಥಾನದಲ್ಲಿದ್ದರೂ, ಪಕ್ಷದ ತಳಮಟ್ಟದ ಸಂಘಟನೆಗೆ ನಾಯಕತ್ವದ ಬೆಂಬಲ ದೊರೆಯುತ್ತಿಲ್ಲ. ಕಲ್ಲು ಮರಳು ಮುಂತಾದ ಅಕ್ರಮ ದಂಧೆಗಳಿಂದ ಹಣ ಗಳಿಸುವ ಪಕ್ಷದವರ ಎದುರು ನಾವು ಅಸಹಾಯಕರಾಗಿದ್ದೇವೆ. ಕೇವಲ ಬಾಯಿ ಮಾತಿನಿಂದ ಪಕ್ಷವನ್ನು ಸಧೃಡವಾಗಿ ಕಟ್ಟುವುದು ಅಸಾಧ್ಯ. ಪ್ರಾಮಾಣಿಕ ಕಾರ್ಯಕರ್ತರಿದ್ದಾರೆ. ಆದರೆ ಅವರಿಗೆ ಬೆಂಬಲವಾಗಿ ಪಕ್ಷದ ಮೇಲ್ಮಟ್ಟದ ನಾಯಕತ್ವ ನಿಲ್ಲಬೇಕಿದೆ ಎಂದರು.ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಕಡಿದಾಳು ಗೋಪಾಲ್ ಮಾತನಾಡಿ, ಪಕ್ಷವನ್ನು ತೊರೆದುಹೋದ, ಹಿಂದಿನ ಮುಖಂಡರ ಹಿಂದೆ ವಲಸೆ ಹೋದ ಕಾರ್ಯಕರ್ತರ ಮನವೊಲಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ಸಮಾಜವಾದಿ ಹೋರಾಟದ ಈ ಕ್ಷೇತ್ರಕ್ಕೆ ದೊಡ್ಡ ಇತಿಹಾಸವೇ ಇದೆ. 5 ಮುಖ್ಯಮಂತ್ರಿಗಳನ್ನು ನೀಡಿರುವ ಜನತಾ ಪರಿವಾರದ ಈ ಪಕ್ಷಕ್ಕೆ ಜಿಲ್ಲೆಯಲ್ಲೂ ಬೇರು ಗಟ್ಟಿಯಾಗಿದೆ. ಶಾಸಕ ಆರಗ ಜ್ಞಾನೇಂದ್ರ ಒಬ್ಬರನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಳಿದ ಎಲ್ಲರೂ ಜನತಾ ಪರಿವಾರದಿಂದಲೇ ಬಂದವರು. ಹೀಗಾಗಿ ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರ್ಪಡೆಯಾದ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ತ್ಯಾಗರಾಜ್, ನಟರಾಜ್, ರಾಮಸ್ವಾಮಿ, ಲಿಂಗಪ್ಪ, ರಮೇಶ್ ನಾಯಕ್, ಚಂದ್ರಕಲಾ, ದೀಪಕ್ ಸಿಂಗ್, ಗುರುದತ್ ಮುಂತಾದವರು ಇದ್ದರು.