ರಾಮನಗರ: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲುವು ಸಾಧಿಸುವಂತೆ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುತ್ತೇನೆ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಜಯಮುತ್ತು ತಿಳಿಸಿದರು.
ಜೆಡಿಎಸ್ ವರಿಷ್ಠರಾದ ದೇವೇಗೌಡ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಜಿಲ್ಲೆಯ ಮುಖಂಡರು ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧ್ಯಕ್ಷ ಸ್ಥಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲಾ ಸಮಿತಿ, ವಿವಿಧ ಘಟಕಗಳ ರಚನೆ ಜೊತೆಗೆ ಮಾಗಡಿ ಮತ್ತು ಹಾರೋಹಳ್ಳಿ ತಾಲೂಕು ಅಧ್ಯಕ್ಷರನ್ನಾಗಿ ಸೂಕ್ತರಾದವರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಿಂದಲೇ ಎಚ್.ಡಿ.ಕುಮಾರಸ್ವಾಮಿ ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಯಾರಿಗೂ ಅನುಮಾನ ಬೇಡ. 2028ರಲ್ಲಿ ಕುಮಾರಸ್ವಾಮಿ ಅವರೇ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ. ಹೀಗಿರುವಾಗ ಬೇರೆ ಪಕ್ಷದಲ್ಲಿರುವ ಶಾಸಕರೊಂದಿಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಬಿಜೆಪಿ ಸೇರುತ್ತಾರೊ ಇಲ್ಲವೊ ಅವರಿಗೆ ಬಿಟ್ಟ ವಿಚಾರ ಎಂದು ಜಯಮುತ್ತು ತಿಳಿಸಿದರು.ನಿಕಟಪೂರ್ವ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ನನಗೆ ರಾಜ್ಯ ಕೋರ್ ಕಮಿಟಿಯಲ್ಲಿ ಪಕ್ಷದ ವರಿಷ್ಠರು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಜಯಮುತ್ತು ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇನ್ನು ಮುಂದೆ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸಮಿತಿಯಂತೆ ಜಿಲ್ಲಾ ಮಟ್ಟದಲ್ಲಿಯೂ ಒಟ್ಟು 36 ವಿವಿಧ ಘಟಕಗಳನ್ನು ರಚನೆ ಮಾಡಲಾಗುವುದು. ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪದಾಧಿಕಾರಿಗಳ ಜವಾಬ್ದಾರಿ ವಹಿಸಲಾಗುವುದು. ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಅವಕಾಶ ನೀಡಲಾಗುವುದು. ಜಿಲ್ಲಾ ಸಮಿತಿ ಮತ್ತು 5 ತಾಲೂಕುಗಳಲ್ಲಿಯೂ ಪದಾಧಿಕಾರಿಗಳನ್ನು ನೇಮಿಸಿ ಪಕ್ಷ ಸಂಘಟನೆಗೆ ವೇಗ ಕೊಡಲಿದ್ದಾರೆ ಎಂದರು.ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರು ಗಳಾದ ಸಬ್ಬಕೆರೆ ಶಿವಲಿಂಗಯ್ಯ, ಕನಕಪುರ ತಾಲೂಕು ಅಧ್ಯಕ್ಷ ನಾಗರಾಜು,ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಳ್ಳಿ ನಾಗರಾಜು, ಮಾಗಡಿ ತಾಲೂಕು ಅಧ್ಯಕ್ಷ ರಾಮಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶಾರದಗೌಡ, ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ದೇವರಾಜು, ದಿಶಾ ಸದಸ್ಯ ಜೆ.ರಾಜೇಶ್ ಮುಖಂಡ ರಾದ ಬಿ.ಉಮೇಶ್, ರವಿ, ಸ್ಟುಡಿಯೋ ಚಂದ್ರು, ಹೋಟೆಲ್ ಉಮೇಶ್, ದೊರೆಸ್ವಾಮಿ, ರಾಮಕೃಷ್ಣಯ್ಯ, ನರಸಿಂಹಮೂರ್ತಿ, ಶಿವಕುಮಾರಸ್ವಾಮಿ, ಯಕ್ಷರಾಜು, ಯೋಗೇಶ್, ಜಯಕುಮಾರ್ ಸೇರಿದಂತೆ ಎನ್ಡಿಎ ಮೈತ್ರಿ ಪಕ್ಷದ ಮುಖಂಡರು ನೂತನ ಅಧ್ಯಕ್ಷ ಜಯಮುತ್ತು ಅವರನ್ನು ಅಭಿನಂದಿಸಿದರು.
21ಕೆಆರ್ ಎಂಎನ್ 3.ಜೆಪಿಜಿಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಜಯಮುತ್ತು ಮತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಅವರನ್ನು ಪಕ್ಷದ ಮುಖಂಡರು ಅಭಿನಂದಿಸಿದರು.