ಕುರುಗೋಡು: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ರೀಯ ಜಲಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ಸಂಪೂರ್ಣ ಕಳಪೆಯಾಗಿದೆ ಎಂದು ಬಿಜೆಪಿ ಕುರುಗೋಡು ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಆರೋಪಿಸಿದರು.
ಕುರುಗೋಡು ಪುರಸಭೆಯಲ್ಲಿ ಹಣಕೊಟ್ಟರೆ ಮಾತ್ರ ಕೆಲಸ ಇಲ್ಲವಾದರೆ ಜನಸಾಮಾನ್ಯರು ನಿತ್ಯ ಕಚೇರಿಗೆ ಅಲೆಯುವ ಕಾಯಕ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಾಲೂಕು ಕೇಂದ್ರದಲ್ಲಿ ತಾಪಂ ಕಚೇರಿ ಇದ್ದರೂ ಇಲ್ಲದಂತಾಗಿದೆ. ಯಾವುದೇ ಕಾರ್ಯ ಚಟುವಟಿಕೆಗಳು ಜರುಗುತ್ತಿಲ್ಲ. ಕಚೇರಿಗೆ ಖರೀದಿಸಿದ ಪೀಠೋಪಕರಣ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಲ್ಲಿ ಅರ್ಜಿಸಲ್ಲಿಸಿದರೂ ಮಾಹಿತಿ ನೀಡುತ್ತಿಲ್ಲ. ಇದರಿಂದ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದು ತಿಳಿಯುತ್ತದೆ ಎಂದು ಆರೋಪಿಸಿದರು.೧೦೦ ಹಾಸಿಗೆ ಆಸ್ಪತ್ರೆ ಕಟ್ಟಡ, ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಪೂರ್ಣಗೊಂಡರೂ ಶಾಸಕರು ಉದ್ಘಾಟನೆಗೆ ಆಸಕ್ತಿ ತೋರುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆ ದೊರೆಯುತ್ತಿಲ್ಲ. ಡಯಾಲಿಸಿಸ್ ಕೇಂದ್ರ ಘಟಕ ಶಾಸಕರು ಉದ್ಘಾಟಿಸಿದ್ದಾರೆ. ಆದರೂ ಕಾರ್ಯನಿರ್ವಹಿಸುತ್ತಿಲ್ಲ. ರೋಗಿಗಳಿಗೆ ರಕ್ತ ಶುದ್ಧೀಕರಣಕ್ಕಾಗಿ ದೂರದ ಬಳ್ಳಾರಿಗೆ ಹೋಗಿ ಚಿಕಿತ್ಸೆ ಪಡೆಯಬೇಕಿದೆ ಎಂದು ಆರೋಪಿಸಿದರು.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಯಿಂದ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್.ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ, ಮಾತನಾಡಿ, ವಿವಿಧ ಅಭಿವೃದ್ಧಿ ನಿಗಮದಲ್ಲಿ ಹಣ ಇಲ್ಲದ ಪರಿಣಾಮ ಗಂಗಾ ಕಲ್ಯಾಣ ಸೇರಿ ಇತರ ಯೋಜನೆ ಜನರಿಗೆ ದೊರೆಯುತ್ತಿಲ್ಲ. ಅದರಲ್ಲೂ ವಾಕ್ಮೀಕಿ ಹಗರಣದಿಂದ ಆ ಸಮುದಾಯಕ್ಕೆ ಯಾವುದೇ ಯೋಜನೆ ತಲುಪುತ್ತಿಲ್ಲ ಎಂದರು.ಜೆ. ಸೋಮಶೇಖರ ಗೌಡ, ವೀರಭದ್ರ ಗೌಡ, ಪುರಸಭೆ ಸದಸ್ಯ ವೀರೇಶ್, ಮಾಜಿ ಸದಸ್ಯ ಕೌಡೆಕಾಯಿ ವೆಂಕಟೇಶ್, ಎಸ್.ಶರತ್ ಗೌಡ, ವಿ.ಗುರು, ಮತ್ತು ತಿಪ್ಪೇರುದ್ರ ಗೌಡ ಇದ್ದರು.