ಹುಬ್ಬಳ್ಳಿ: ಇಂದಿಗೂ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಹಾರಕ್ಕೆ ಹೆಚ್ಚೆಚ್ಚು ಉದ್ಯೋಗ ಮೇಳಗಳು ನಡೆಯುವಂತಾಗಲಿ ಎಂದು ಕುಂದಗೋಳದ ಕಲ್ಯಾಣಪುರಮಠದ ಬಸವಣ್ಣಜ್ಜನವರು ಹೇಳಿದರು.
ಮನುಷ್ಯನಿಗೆ ಉದ್ಯೋಗ ಅವಶ್ಯವಾಗಿದೆ. ಇಂದು ಹಣವಿದ್ದರೆ ಎಲ್ಲ ಕೆಲಸ ಕಾರ್ಯಗಳಾಗಲು ಸಾಧ್ಯ. ಬದುಕಿನುದ್ದಕ್ಕೂ ನಾವು ನಿತ್ಯದ ಜೀವನಕ್ಕೆ ಶ್ರಮವಹಿಸಿ ದುಡಿಯುವುದು ಅವಶ್ಯವಾಗಿದೆ. ಒಳ್ಳೆಯ ದಾರಿಯಲ್ಲಿ ನಡೆದು, ದುಡಿಮೆ ಮಾಡಿ ಬದುಕು ಕಟ್ಟಿಕೊಳ್ಳಿ ಎಂದರು.
50 ಸಾವಿರ ಯುವಕರಿಗೆ ಉದ್ಯೋಗ ನೀಡುವ ಸಂಕಲ್ಪ ಹೊಂದಿರುವ ಕೆಜಿಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ಅವರ ನಿರ್ಧಾರ ಅಭಿನಂದನಾರ್ಹ. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಇಂತಹ ಉದ್ಯೋಗ ಮೇಳ ಸಹಕಾರಿಯಾಗಿವೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಸಾಧನಾ ಪೊಟೆ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಬೃಹತ್ ಉದ್ಯೋಗ ಮೇಳ ನಡೆಯುತ್ತಿರುವುದು ಸಂತಸದ ಸಂಗತಿ. ಅಂತಾರಾಷ್ಟ್ರೀಯ ಉದ್ಯೋಗ ಅವಕಾಶಗಳು ಸಾಕಷ್ಟಿವೆ. ಆದರೆ, ವೃತ್ತಿ ಎಂಬ ಪರಿಭಾಷೆಯನ್ನು ನಾವು ಅರಿತುಕೊಳ್ಳಬೇಕು. ಕೇವಲ ವೇತನವನ್ನು ನೋಡಿ ಉದ್ಯೋಗ ಅಳೆಯಬೇಡಿ. ಕಾಟಾಚಾರಕ್ಕೆ ಉದ್ಯೋಗ ಎಂಬ ಕಲ್ಪನೆಯಿಂದ ಹೊರಬಂದು, ಕೌಶಲ್ಯ ಅಳವಡಿಸಿಕೊಂಡು ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವೃತ್ತಿಯಲ್ಲಿ ದೃಢ ನಿರ್ಧಾರ, ಗಟ್ಟಿತನ ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ಸಿಗಲಿ ಶ್ರದ್ಧೆಯಿಂದ ಗೌರವಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಕಾಲೇಜಿನ ನಿಯೋಜನೆ ಅಧಿಕಾರಿ ಶಿಲ್ಪಾ ಸುಣಗಾರ, ಕೆಜಿಪಿ ಫೌಂಡೇಶನ್ ಪ್ರಮುಖರಾದ ಸಂಕೇತ ಶೇಟ್, ರಾಜು ಪಾಟೀಲ ಸೇರಿದಂತೆ ಹಲವರಿದ್ದರು. ಪ್ರಾಚಾರ್ಯ ಎಸ್.ಎಲ್. ಪಾಟೀಲ ಸ್ವಾಗತಿಸಿದರು. ಸತೀಶ ಕುಂದಗೋಳ ಪ್ರಾರ್ಥಿಸಿದರು. ಡಾ. ನೇತ್ರಾವತಿ ಗಬ್ಬೂರ ನಿರೂಪಿಸಿದರು. ಸಾವಿರಾರು ಉದ್ಯೋಗಾಂಕ್ಷಿಗಳು ಬೆಳಗ್ಗೆಯಿಂದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು ಕಂಡು ಬಂದಿತು.