ವಲಸೆ ತಡೆಗಟ್ಟಲು ಮೇ ಅಂತ್ಯದವರೆಗೆ ಅಭಿಯಾನ । ನರೇಗಾದಿಂದ ಕುಟುಂಬ ನಿರ್ವಹಣೆ ಸಾಧ್ಯಪರಶಿವಮೂರ್ತಿ ದೋಟಿಹಾಳ
ಬರಗಾಲದ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನರು ವಲಸೆ ಹೋಗಬಾರದು, ಕುಟುಂಬ ನಿರ್ವಹಣೆಯ ಸಲುವಾಗಿ ಇದ್ದುದರಲ್ಲೇ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ "ವಲಸೆ ಯಾಕ್ರೀ? ನಿಮ್ಮೂರಲ್ಲೇ ಉದ್ಯೋಗ ಖಾತರಿ " ಅಭಿಯಾನವನ್ನು ಆರಂಭಿಸಲಾಗಿದೆ.
ತಾಲೂಕಿನಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿ ಸ್ಥಳೀಯವಾಗಿ ಕೆಲಸ ಒದಗಿಸಲಾಗುತ್ತಿದೆ. ಆದರೂ ಸಹಿತ ಕೆಲವೆಡೆ ಜನರು ಉದ್ಯೋಗ ಅರಸಿ ಹೋಗುತ್ತಿರುವುದನ್ನು ತಡೆಯಲು ಮುಂಗಾರು ಆರಂಭಕ್ಕೂ ಮುನ್ನ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿದೆ.ಈ ಹಿನ್ನೆಲೆ ಗ್ರಾಮೀಣ ಪ್ರದೇಶದ ಎಲ್ಲ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2024ರ ಮೇ ಅಂತ್ಯದ ವರೆಗೆ "ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ " ಎಂಬ ಅಭಿಯಾನ ನಡೆಸುತ್ತಿದ್ದಾರೆ.
ಅಭಿಯಾನದ ಉದ್ದೇಶಗಳು:ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸುವುದು, ಕೂಲಿ ಆಧಾರಿತ ಕಾಮಗಾರಿಗಳನ್ನು ಸೃಜಿಸಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು, ವಿಶೇಷ ಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳಿಗೆ ಆದ್ಯತೆಯ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಒದಗಿಸುವುದು, ಗ್ರಾಮೀಣ ಪ್ರದೇಶದಲ್ಲಿ ವಲಸೆ ನಿಲ್ಲಿಸುವುದು ಸೇರಿದಂತೆ ಅನೇಕ ಉದ್ದೇಶ ಹೊಂದಲಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಅಭಿಯಾನ:"ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ " ಅಭಿಯಾನದಡಿ ಮನೆ ಮನೆಗೆ ಭೇಟಿ ನೀಡಿ ಫಾರ್ಮ್ ನಂಬರ್ 6ರಲ್ಲಿ ಕೆಲಸದ ಬೇಡಿಕೆ ಪಡೆಯುವ ಮೂಲಕ ಕೆಲಸಕ್ಕಾಗಿ ಅರ್ಜಿ ಕೊಟ್ಟವರಿಗೆ ಸಮರ್ಪಕವಾಗಿ ಕೆಲಸ ನೀಡಲಾಗುತ್ತದೆ. ಈ ಕೆಲಸವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಾಡಬೇಕಾಗಿದೆ.
---ಕೋಟ್:
ನರೇಗಾ ಯೋಜನೆಯಲ್ಲಿ ಕೆಲಸ ಮಾಡುವವರು ಫಾರಂ ನಂ. 6ರಲ್ಲಿ ಅರ್ಜಿಯನ್ನು ತುಂಬಿಕೊಟ್ಟು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು.ಆನಂದರಾವ್ ಕುಲಕರ್ಣಿ, ಪಿಡಿಒ ಬಿಜಕಲ್ ಗ್ರಾಪಂಕೋಟ್
ಕುಟುಂಬ ನಿರ್ವಹಣೆಯ ಸಲುವಾಗಿ ತಾಲೂಕಿನ ಗ್ರಾಮಸ್ಥರು ವಲಸೆ ಹೋಗಬಾರದು ಎಂಬ ಸದುದ್ದೇಶದಿಂದ ಈ ಅಭಿಯಾನ ಮಾಡುತ್ತಿದ್ದು, ಕೆಲಸದಿಂದ ಕುಟುಂಬದ ನಿರ್ವಹಣೆಗೆ ಅನೂಕೂಲವಾಗಲಿದೆ.ನಿಂಗಪ್ಪ ಮಸಳಿ, ತಾಪಂ ಇಒ ಕುಷ್ಟಗಿ
23ಕೆಎಸಟಿ4: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಬೋದೂರು ತಾಂಡಾದಲ್ಲಿ ಉದ್ಯೋಗ ಖಾತರಿ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಯಿತು.