ಜೋಯಿಡಾದ ಗಡ್ಡೆ ಗೆಣಸು ವಿಶ್ವವಿಶ್ಯಾತಿಯಾಗಿದೆ, ಗಡ್ಡೆ ಗೆಣಸು ಬೆಳೆಯುವ ಪದ್ಧತಿ ಜೋಯಿಡಾದಲ್ಲಿದೆ. ಇಲ್ಲಿನ ಜನರು ಎಂದಿಗೂ ಸಂಸ್ಕೃತಿ ಬಿಟ್ಟಿಲ್ಲ.
ಜೋಯಿಡಾ: ಗಡ್ಡೆ ಗೆಣಸು ಬೆಳೆಯುವವರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡಬೇಕು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದರು.ತಾಲೂಕಿನ ಕುಣಬಿ ಭವನದ ಮುಂಭಾಗದಲ್ಲಿ 11ನೇ ಗಡ್ಡೆ ಗೆಣಸು ಮೇಳವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಉದ್ಘಾಟಿಸಿ, ಮಾತನಾಡಿದರು.ಜೋಯಿಡಾದ ಗಡ್ಡೆ ಗೆಣಸು ವಿಶ್ವವಿಶ್ಯಾತಿಯಾಗಿದೆ, ಗಡ್ಡೆ ಗೆಣಸು ಬೆಳೆಯುವ ಪದ್ಧತಿ ಜೋಯಿಡಾದಲ್ಲಿದೆ. ಇಲ್ಲಿನ ಜನರು ಎಂದಿಗೂ ಸಂಸ್ಕೃತಿ ಬಿಟ್ಟಿಲ್ಲ. ನಾನು ಚಿಕ್ಕವನಿಂದಾಗಲೂ ಜೋಯಿಡಾಕ್ಕೆ ಬರುತ್ತಿದ್ದೇನೆ. ಅಂದಿನಿಂದಲೂ ಗಡ್ಡೆ ಗೆಣಸು ತಿನ್ನುತ್ತಾ ಬಂದಿದ್ದೇನೆ. ಇದು ಆರೋಗ್ಯಕರ ಆಹಾರ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಡ್ಡೆ ಗೆಣಸು ಈ ಭಾಗದಲ್ಲಿ ಬೆಳೆಯಬೇಕು ಎಂದರು.
ಕೇಂದ್ರ ಸರ್ಕಾರ ಗಡ್ಡೆ ಗೆಣಸು ಬೆಳೆಯುವವರಿಗೆ ಹೆಚ್ಚಿನ ಮಹತ್ವ ನೀಡಬೇಕು. ರೈತ ಬೆಳೆದ ಬೆಳೆಗೆ ಸಿಗಬೇಕಾದ ದರ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಗಡ್ಡೆ ಗೆಣಸು ಬೆಳೆಯಲು ನನ್ನ ಸಹಕಾರ ಎಂದಿಗೂ ಇದೆ ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗಡ್ಡೆ ಗೆಣಸು ಮೇಳ ಇದು ಜೋಯಿಡಾದ ಹಬ್ಬ ಎಂದರೆ ತಪ್ಪಾಗಲಾರದು. ಗಡ್ಡೆ ಗೆಣಸು ಜೋಯಿಡಾದ ಬ್ರಾಂಡ್ ಆಗಿದೆ. ಇಲ್ಲಿನ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರು ಗಡ್ಡೆ ಗೆಣಸು ಖರೀದಿ ಮಾಡಿ ಸ್ಥಳೀಯ ಗಡ್ಡೆ ಗೆಣಸು ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು. ಕೇಂದ್ರ ಸರ್ಕಾರದ ವತಿಯಿಂದ ಗಡ್ಡೆ ಗೆಣಸು ಬೆಳೆಗಾರರಿಗೆ ಹಾಗೂ ಸಂಘಟಕರಿಗೆ ಸಹಾಯ ಮಾಡುತ್ತೇವೆ ಎಂದರು.ಮಹಿಳೆಯರಿಂದ ಮಾರಾಟ: ಗಡ್ಡೆ ಗೆಣಸು ಮೇಳದಲ್ಲಿ ಮಹಿಳೆಯರದ್ದೆ ಮೇಲುಗೈ ಎಂದರೆ ತಪ್ಪಾಗಲಾರದು. ಗಡ್ಡೆ ಗೆಣಸು ಮಾರಲು ಮಹಿಳೆಯರೆ ಹೆಚ್ಚಾಗಿ ಬಂದಿದ್ದರು. ನೂರಾರು ವಿಧದ ಗಡ್ಡೆ ಗೆಣಸುಗಳು ಹಾಗೂ ನೆಲ್ಲಿಕಾಯಿ, ಬಾಳೆ ಹಾಗೂ ಇನ್ನಿತರ ಸ್ಥಳೀಯ ರೈತರು ಬೆಳೆದ ಬೆಳೆಗಳನ್ನು ಮಾರಲು ತಂದಿದ್ದು ವಿಶೇಷವಾಗಿತ್ತು. ಗಡ್ಡೆ ಗೆಣಸುಗಳಿಂದ ವಿವಿಧ ಖಾದ್ಯಗಳನ್ನು ಮಾಡಲಾಗಿತ್ತು.11ನೇ ವರ್ಷದ ಗಡ್ಡೆ ಗೆಣಸು ಮೇಳದಲ್ಲಿ ಸಾವಿರಾರು ಜನರು ಪಾಲ್ಗೊಂಡು ಜನಾಕರ್ಷಣೆಗೊಂಡಿತು. ಕಾರ್ಯಕ್ರಮ ಆಯೋಜನೆ ಮಾಡಿದ ಸಂಘಟಕರನ್ನು ಜನರು ಅಭಿನಂದಿಸಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರಾದ ಜಯಾನಂದ ಡೇರೇಕರ, ವಿನಯ ದೇಸಾಯಿ, ಶಾಂತಾರಾಮ್ ಕಾಮತ್, ರವಿ ರೆಡೆಕರ, ಸುದರ್ಶನ ಹೆಗಡೆ, ನರಸಿಂಹ ಛಾಪಖಂಡ ಇತರರು ಇದ್ದರು.ತಾಲೂಕು ಕುಣಬಿ ಸಮಾಜ, ಕಾಳಿ ಪ್ರವಾಸೋದ್ಯಮ ಸಂಸ್ಥೆ, ಕಾಳಿ ರೈತ ಉತ್ಪಾದನಾ ಕಂಪನಿ, ಗಡ್ಡೆ ಗೆಣಸು ವ್ಯಾಪಾರಸ್ಥರ ಸಂಘ ಜೋಯಿಡಾ ಇವರ ಆಶ್ರಯದಲ್ಲಿ ಗಡ್ಡೆ ಗೆಣಸು ಮೇಳ ಏರ್ಪಡಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.