ಹನುಮಸಾಗರ: ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಮುಖ್ಯಶಿಕ್ಷಕ ಶರಣಪ್ಪ ಗುಳೇದ ಕರೆ ನೀಡಿದರು.
ಪೋಲಿಯೋ ಎನ್ನುವುದು ಮಕ್ಕಳನ್ನು ಶಾಶ್ವತ ಅಂಗವೈಕಲ್ಯಕ್ಕೆ ತಳ್ಳುವ ಅಪಾಯಕಾರಿ ಕಾಯಿಲೆಯಾಗಿದ್ದು, ಲಸಿಕೆಯಿಂದ ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಪಾಲಕರು ಯಾವುದೇ ನಿರ್ಲಕ್ಷ್ಯ ತೋರದೆ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ನೀಡಲಾಗುವ ಎರಡು ಹನಿ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಜಾಥಾದಲ್ಲಿ ವಿದ್ಯಾರ್ಥಿಗಳು ಪೋಲಿಯೋ ಲಸಿಕೆಯ ಮಹತ್ವ ಸಾರುವ ಫಲಕ ಹಿಡಿದು ಎರಡು ಹನಿ ಜೀವದಾನ, ಪ್ರತಿ ಮಗು ಲಸಿಕೆ ಪಡೆಯಲಿ, ಪೋಲಿಯೊ ಮುಕ್ತ ಭಾರತ ನಮ್ಮ ಗುರಿ ಎಂಬ ಘೋಷಣೆ ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಸಾರ್ವಜನಿಕರು ಸಹ ಜಾಥಾಕ್ಕೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಅನ್ನದಾನೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವೀಂದ್ರ ಅಮಲಿಕೊಪ್ಪಮಠ, ಈರಣ್ಣ ಅಂಗಡಿ, ರಾಮನಗೌಡ ಗೌಡಪ್ಪನವರ, ಚಂದ್ರಶೇಖರ ವಸ್ತ್ರದ, ಶರಣಯ್ಯ ಕೊಳ್ಳಿ, ಅಬ್ದುಲ್ ರಜಾಕ್ ರಾಹುತ್, ಮಂಜುಳಾ ಗುಡಿ, ವಿಜಯಲಕ್ಷ್ಮಿ ಸಜ್ಜನ, ಚಂದ್ರಕಲಾ ಪಟ್ಟಣಶೆಟ್ಟಿ, ಆಶಾ ಕಾರ್ಯಕರ್ತೆಯರು, ಶಾಲೆಯ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇತರರು ಇದ್ದರು.