ಬ್ಯಾಡಗಿ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಸಮಗ್ರ ಸ್ನೇಹ ಸದನ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಎಸ್.ಎಸ್.ಪಿ.ಎನ್. ಪ್ರೌಢಶಾಲೆ ಮತ್ತು ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಎಸ್.ಎಸ್.ಪಿ.ಎನ್. ಕಾಲೇಜಿನಿಂದ ಪ್ರಾರಂಭವಾದ ಜಾಥಾ ಏಡ್ಸ್ ದುಷ್ಟರಿಣಾಮಗಳ ಕುರಿತು ಘೋಷಣೆಗಳೊಂದಿಗೆ ಮುಖ್ಯರಸ್ತೆಯಲ್ಲಿ ಸಾಗಿತಲ್ಲದೇ ಬಸ್ ನಿಲ್ದಾಣದ ಬಳಿ ಸಭೆಯಾಗಿ ಮಾರ್ಪಟ್ಟಿತು.ಶಿಕ್ಷೆಯ ಬದಲು ಅಪ್ಪಿಕೊಳ್ಳೋಣ: ಜಾಥಾ ಉದ್ಘಾಟಿಸಿದ ಪ್ರಾಚಾರ್ಯ ಮಂಜುನಾಥ ಬಳ್ಳಾರಿ ಮಾತನಾಡಿ, ಅಸುರಕ್ಷಿತ ಲೈಂಗಿಕಕ್ರಿಯೆ ಇದಕ್ಕೆ ಮೂಲ ಕಾರಣವಾಗಿದ್ದು, ಹದಿಹರೆಯದ ಯುವತಿಯರಲ್ಲಿ ಹೆಚ್ಚಾಗಿ ಕಾಣುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ ಹಾಗೂ ತಿರಸ್ಕೃತರಿಗೆ ಆಶ್ರಯ ನೀಡಬೇಕಾಗಿದೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು.
ಆರೋಗ್ಯ ಇಲಾಖೆ ಸಮಾಲೋಚನಾಧಿಕಾರಿ ಚಂದ್ರಶೇಖರ ಮಾತನಾಡಿ, ಆರೋಗ್ಯ ಇಲಾಖೆ ಏಡ್ಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ. ಏಡ್ಸ್ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ. ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.ಬದುಕನ್ನು ಕಟ್ಟಿಕೊಳ್ಳಲಿ: ಸಮಗ್ರ ಸ್ನೇಹ ಸದನ ಸಮಾಜ ಕಾರ್ಯ ನಿರ್ವಹಣಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ರೂಪಾ ಮಾತನಾಡಿ, ಏಡ್ಸ್ ಸೋಂಕಿತ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸೋಂಕಿತರ ಜೀವನಕ್ಕೆ ಭರವಸೆ ನೀಡುತ್ತಿದೆ. ನಿರಾಶ್ರಿತರ ಶಿಬಿರದಲ್ಲಿ ಅವರು ಅತ್ಯುತ್ತಮವಾಗಿ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಶಾಂತ ನವಲೆ, ಆಪ್ತ ಸಮಾಲೋಚಕ ಡಿ.ಎನ್. ಚಂದ್ರಶೇಖರ, ಸೇರಿದಂತೆ ಎಸ್.ಎಸ್.ಪಿ.ಎನ್. ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.