ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಈ ನಾಲ್ಕು ಸಂಹಿತೆಗಳಿಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.
ಈ ಕಾನೂನುಗಳನ್ನು ಜಾರಿಗೆ ತಂದಿರುವುದು ಈ ದೇಶದ ಬಂಡವಾಳ ಶಾಹಿಗಳಿಗೆ ಹೆಚ್ಚಿನ ಪ್ರಮಾಣದ ಲಾಭ ಮಾಡಿಕೊಡಲೇ ಹೊರತು, ಕಾರ್ಮಿಕರ ಹಿತಾಸಕ್ತಿಗಾಗಿ ಅಲ್ಲ. ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಮಾಲೀಕ ರಾತ್ರೋರಾತ್ರಿ ಕಂಪನಿ ಮುಚ್ಚಬಹುದು ಎಂಬ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ. ಮುಷ್ಕರ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಾಗುತ್ತದೆ. 60 ದಿನಕ್ಕಿಂತ ಅಧಿಕ ದಿನ ನೋಟಿಸ್ ನೀಡಿ ಬಳಿಕ ಮುಷ್ಕರ ಮಾಡಬೇಕು ಎಂಬ ಸಂಹಿತೆ ಕಾರ್ಮಿಕರನ್ನು ಕಂಪನಿ ಮಾಲೀಕರು ಹೆದರಿಸಲು ಸಮಯಾವಕಾಶ ಕೊಟ್ಟಂತೆ. ತಮ್ಮ ಸಂಸ್ಥೆಯ ಅನ್ಯಾಯದ ವಿರುದ್ಧ ನಡೆಯುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರವೇ ಕಾನೂನುಬದ್ಧವಾಗಿ ನೀಡುವ ಅವಕಾಶ ಇದಾಗಿದೆ ಎಂದು ಆರೋಪಿಸಿದರು.ಸಮಗ್ರ ವೇತನ ಪರಿಷ್ಕರಣೆ ಮಾಡದೆ ಸುಮಾರು 7 ವರ್ಷ ಕಳೆದಿವೆ. ಬೆಲೆ ಏರಿಕೆ ಹಾಗೂ ಹಣದುಬ್ಬರದಿಂದಾಗಿ ಕಾರ್ಮಿಕರ ಕುಟುಂಬದ ನಿರ್ವಹಣೆ ಅಸಹನೀಯವಾಗುತ್ತಿದೆ ಕೂಡಲೇ ವೇತನ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.