ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಜೊಲ್ಲೆ ದಂಪತಿ ಪ್ರತಿಯೊಂದು ಕಾರ್ಯ ಸಮಾಜಕ್ಕೆ ದಾರಿದೀಪವಾಗುತ್ತಿವೆ. ಅವರು ಸ್ಥಾಪಿಸಿದ ಸಂಸ್ಥೆಗಳು ದಿನಂಪ್ರತಿ ಪ್ರಗತಿಯೊಂದಿಗೆ ವಿಸ್ತಾರವಾಗುತ್ತಿವೆ. ಅವರ ಕಾರ್ಯ ಅನೇಕರಿಗೆ ಪ್ರೇರಣೆ ಮತ್ತು ಆದರ್ಶ ನೀಡಲಿದೆ ಎಂದು ನಿಡಸೋಶಿ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮಿಜಿ ಹೇಳಿದರು.ನಗರದ ಮ್ಯಾಗನಮ್ ಚಿತ್ರಮಂದಿರದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜೀವನ ಕುರಿತ ರಿಫಾರ್ಮರ್ ಕಿರುಚಿತ್ರ ಬಿಡುಗಡೆ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಸಮಾಜ ಉಪಯೋಗಿ ಕೆಲಸ ಕಾರ್ಯಗಳನ್ನು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾಜಿ ಸಂಸದ ಜೊಲ್ಲೆ ರವರ ಸಂಘರ್ಷದ ಜೀವನ ಅನೇಕ ಏರಿಳಿತಗಳಿಂದ ಕೂಡಿದೆ. ಯಶಸ್ಸುಗಳ ಬಗ್ಗೆ ಚಿಂತೆ ಮಾಡದೆ ಅವರು ಕೇವಲ ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಅಧಿಕಾರ ಇರಲಿ ಬಿಡಲಿ ಸಮಾಜ ಕಾರ್ಯವನ್ನು ಅವರು ಮುಂದುವರಿಸಿದ್ದು ಆದರ್ಶ. ಇಂತಹ ಮಹಾನ ನಾಯಕರ ಬಿಡುಗಡೆಯಾಗುತ್ತಿರುವ ಸಾಕ್ಷ್ಯಚಿತ್ರ ಮುಂದಿನ ಪಿಳಿಗೆಗಳಿಗೆ ಪ್ರೇರಣೆ ನೀಡಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆ ಅವರ ಜೀವನ ಪೂರ್ತಿ ಸಂಘರ್ಷದಿಂದ ಕೂಡಿದೆ. ೧೮ ವಯಸ್ಸಿನಲ್ಲಿಯೇ ಒಂದೊಂದು ಕಷ್ಟಗಳು ಎದುರಾದವು. ಅವಗಳ ಮೇಲೆ ಹಿಡಿತ ಸಾಧಿಸಿ ಇಂದು ಇಷ್ಟೊಂದು ಪ್ರಗತಿ ಸಾಧಿಸಿದ್ದು ಅವರ ತಂದೆ ತಾಯಿ ನೀಡಿದ ಸಂಸ್ಕಾರದಿಂದ. ಎಷ್ಟೋ ಕಷ್ಟಗಳು ಬಂದರೂ ಮುನ್ನುಗ್ಗುವ ಅವರ ಸಂಘರ್ಷದ ಜೀವನದ ಕೀರು ಚಿತ್ರ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆ ನೀಡಲಿ ಎಂದರು.ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಸಂಜಯ ಅಡಕೆ, ಸಂಜಯ ಪ್ರಭು ಮಾತನಾಡಿದರು. ನಾರಾಯಣ ಗೋರೆ, ಸಾಗರ ಸುವರ್ಣ, ಸಂಜಯ ಪ್ರಭು ಅವರಿಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಣಲಿಂಗ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಸ್ಥಳೀಯ ನಗರಸಭೆ ಅಧ್ಯಕ್ಷೆ ಸೋನಲ್ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಜಸರಾಜ ಗಿರೆ, ವೀರನಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲ್ಗೋಡ, ಹಿರಾಶುಗರ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಸತೀಶ ಅಪ್ಪಾಜಿಗೋಳ, ಮೊದಲಾದವರು ಅಹಿತ ಅಪಾರ ಜನರು ನೆರೆದಿದ್ದರು. ಜೊಲ್ಲೆ ಗ್ರುಪ್ ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಪಾಟೀಲ ನೀರೂಪಿದರು, ವಿಜಯ ರಾವುತ ವಂದಿಸಿದರು.