ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮುಖ್ಯ

KannadaprabhaNewsNetwork | Published : Aug 1, 2024 12:32 AM

ಸಾರಾಂಶ

ಸುರಪುರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಮೂಲಕ ಅವುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಏಳಿಗೆಗಾಗಿ ಶ್ರಮಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾರೆ. ಜೀವದ ಹಂಗು ತೊರೆದು ನಿರ್ವಹಿಸುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ನಿಷ್ಠಿ ಕಡ್ಲಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗ ಸಮರ್ಪಕವಾಗಿ ಕೆಲಸ ಮಾಡಬೇಕು. ಆಡಳಿತ ನಡೆಸುವವರ ಲೋಪ ದೋಷಗಳನ್ನು ಎತ್ತಿ ತೋರಿಸಿ, ಜನಾಭಿಪ್ರಾಯ ರೂಪಿಸುವ ದೊಡ್ಡ ಶಕ್ತಿ ಪತ್ರಿಕೋದ್ಯಮಕ್ಕಿದೆ. ನಿರ್ಭಿತಿ, ನಿಷ್ಪಕ್ಷಪಾತವಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಹಿರಿಯ ಪತ್ರಕರ್ತ ಅಶೋಕ್ ಸಾಲವಡಗಿ, ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ. ನಾಯಕ, ತಾಪಂ ಇಒ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ್ ಮಾತನಾಡಿದರು.

ಪತ್ರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪತ್ರಕರ್ತರಾದ ಮಲ್ಲು ಗುಳಗಿ, ಮಹಾದೇವಪ್ಪ ಬೊಮ್ಮನಹಳ್ಳಿ ಅವರಿಗೆ ದಿ.ಶ್ರೀಮತಿ ಸುನಿತಾ ಹೊನ್ನಪ್ಪ ತೇಲ್ಕರ್ ಅವರ ಸ್ಮರಣಾರ್ಥವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಪೌರಾಯುಕ್ತ ಜೀವನ್ ಕಟ್ಟಿಮನಿ, ಸಮಾಜ ಕಲ್ಯಾಣಾಧಿಕಾರಿ ಡಾ.ಶೃತಿ, ಬಿಸಿಎಂ ವಿಸ್ತೀರ್ಣಾಧಿಕಾರಿ ತಿಪ್ಪಾರೆಡ್ಡಿ, ಎಸ್.ಜಿ.ಪಾಟೀಲ್, ಹಿರಿಯ ಪತ್ರಕರ್ತರಾದ ರಾಘವೇಂದ್ರ ಕಾಮನಟಗಿ, ಮಹೇಶ್ ಕಲಾಲ್, ಸಿದ್ದು ಲಿಂಗೇರಿ, ಪವನ್ ಕುಲಕರ್ಣಿ, ವಿಜಯಾಚಾರ್ಯ ಪುರೋಹಿತ, ಗಿರೀಶ್ ಶಾಬಾದಿ, ಸಿದ್ದಯ್ಯ ಪಾಟೀಲ್, ಧೀರೇಂದ್ರ ಕುಲಕರ್ಣಿ, ಡಿ.ಸಿ.ಪಾಟೀಲ್, ಗುಂಡುಭಟ್ಟ ಜೋಶಿ, ಶ್ರೀಕರಭಟ್ ಜೋಶಿ, ನಾಗರಾಜ್ ನ್ಯಾಮತಿ, ಪುರುಷೋತ್ತಮ, ಪರಶುರಾಮ ಮಲ್ಲಿಭಾವಿ, ಕ್ಷೀರಲಿಂಗಯ್ಯ ಸೇರಿದಂತೆ ಇತರರಿದ್ದರು.

Share this article