ಪತ್ರಕರ್ತರು ನೈಜ ವರದಿಯಿಂದ ಸರ್ಕಾರದ ಕಣ್ಣು ತೆರೆಸಲಿ: ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌

KannadaprabhaNewsNetwork | Published : Jul 2, 2024 1:36 AM

ಸಾರಾಂಶ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಪತ್ರಕರ್ತರು ನೈಜ ವರದಿ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕಿದೆ. ಜಿಲ್ಲೆಯ ಪತ್ರಕರ್ತರು ಈ ವಿಷಯದಲ್ಲಿ ಮುಂದಿದ್ದಾರೆ. ನಕರಾತ್ಮಕ ವರದಿಗಳಿಗಿಂತ ಸಕಾರಾತ್ಮಕ ವರದಿಯತ್ತ ಪತ್ರಕರ್ತರು ಒಲವು ಹೊಂದಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ನಗರದ ಮಲ್ಲಿಗಿ ಹೋಟೆಲ್‌ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪತ್ರಿಕೆಗಳು ಸಮಾಜದ ಕಣ್ಣು ಹಾಗೂ ಧ್ವನಿಯಾಗಿವೆ. ಈಗಲೂ ಪತ್ರಿಕೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ಪತ್ರಿಕೆಗಳ ಸಂಖ್ಯೆ ಹಾಗೂ ಪ್ರಸರಣ ಕೂಡ ಹೆಚ್ಚಿದೆ. ಹಲವು ವಿಧದ ಮಾಧ್ಯಮಗಳು ಬಂದರೂ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಪೈಪೋಟಿಯ ನಡುವೆಯೂ ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಂಡು ಸಾಗುತ್ತಿವೆ ಎಂದರು.

ಪತ್ರಕರ್ತರ ಬದುಕು ಸರಳವಾಗಿಲ್ಲ. ಜಿಲ್ಲಾ, ತಾಲೂಕು, ಹೋಬಳಿ ವರದಿಗಾರರಿಗೆ ಸರಿಯಾಗಿ ವೇತನ ಇರುವುದಿಲ್ಲ. ಕಾರ್ಮಿಕ ಕಾಯ್ದೆ ಪ್ರಕಾರ ಪತ್ರಕರ್ತರಿಗೆ ಕನಿಷ್ಠ ವೇತನ ಕೂಡ ಸಿಗುತ್ತಿಲ್ಲ. ಸರ್ಕಾರ ಕಾರ್ಮಿಕ ಕಾಯ್ದೆ ಪ್ರಕಾರ ಒಂದು ಮಾನದಂಡವನ್ನೇ ರಚಿಸಿದೆ. ಸೇವಾ ಹಿರಿತನ ತಕ್ಕಂತೆ ವೇತನ, ಇತರೆ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಟನೆ ಹಕ್ಕೊತ್ತಾಯ ಮಾಡಬೇಕು ಎಂದರು.

ಪತ್ರಕರ್ತರು ಒತ್ತಡದ ಬದುಕಿನ ನಡೆಯೂ ಸಮಾಜಮುಖಿ ವರದಿಗಳನ್ನು ಮಾಡುತ್ತ ಬರುತ್ತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಸಮಸ್ಯೆ ಕುರಿತು ಸಾಕಷ್ಟು ವರದಿಗಳು ಪ್ರಕಟವಾಗುತ್ತಿವೆ. ಈ ವರದಿಗಳನ್ನಾಧರಿಸಿ ನಾವು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿದೆ. ಪತ್ರಕರ್ತರು ಜಿಲ್ಲಾಡಳಿತವನ್ನು ವಿಮರ್ಶಿಸಿದಾಗ ನಾವು ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದರು.

ಜಿಪಂ ಸಿಇಒ ಸದಾಶಿವಪ್ರಭು ಮಾತನಾಡಿ, ಸೋಶಿಯಲ್‌ ಮೀಡಿಯಾ ಎಷ್ಟೇ ಆಕ್ಟಿವ್‌ ಆಗಿದ್ರೂ ಮುಂಚೂಣಿ ಮಾಧ್ಯಮಗಳ ಎದುರು ಸೋತಿದೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ತಮ್ಮ ಘನತೆ ಉಳಿಸಿಕೊಂಡು ಸಾಗುತ್ತಿವೆ ಎಂದರು.

ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಮಾತನಾಡಿ, ಪತ್ರಕರ್ತರು ಸದಾ ಕಾನೂನಿನ ಅರಿವು ಹೊಂದಬೇಕು. ಈಗ ದೇಶದಲ್ಲಿ ಕೆಲ ಕಾನೂನುಗಳು ಬದಲಾವಣೆ ಆಗಿವೆ. ಇವುಗಳನ್ನು ಅರಿತುಕೊಳ್ಳಬೇಕು. ಪತ್ರಕರ್ತರ ಸಂಘದಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿರುವುದು ಶ್ಲಾಘನೀಯ. ಈ ಪ್ರತಿಭಾವಂತ ಮಕ್ಕಳು ಐಎಎಸ್‌, ಕೆಎಎಸ್‌ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹುಡಾ ಅಧ್ಯಕ್ಷ ಎಚ್‌.ಎನ್‌. ಮಹಮ್ಮದ್ ಇಮಾಮ್‌ ನಿಯಾಜಿ ಮಾತನಾಡಿ, ಪತ್ರಕರ್ತರ ಜೊತೆಗೆ ಎಂದಿಗೂ ಬಾಂಧವ್ಯ ಹೊಂದಿರುವೆ. ಪತ್ರಕರ್ತರಿಗೆ ನಿವೇಶನಕ್ಕಾಗಿ ಜಿಲ್ಲಾಡಳಿತ ಜಾಗ ಮಂಜೂರು ಮಾಡಿದರೆ ಹುಡಾದಿಂದ ಅಭಿವೃದ್ಧಿ ಮಾಡಿಕೊಡುವೆ ಎಂದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಮುಖಂಡರಾದ ಅನ್ನಪೂರ್ಣಮ್ಮ ತುಕಾರಾಂ ಮಾತನಾಡಿ, ಮಾಧ್ಯಮಗಳು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಘನತೆಗೆ ಚ್ಯುತಿಬಾರದಂತೆ ವರದಿ ಮಾಡಬೇಕು. ಈ ವರದಿಗಳು ನೈಜತೆಯಿಂದ ಕೂಡಿರಬೇಕು, ವೈಭವೀಕರಣ ಆಗಬಾರದು, ವರದಿಯಿಂದ ಯಾರೋಬ್ಬರ ಮಾನ, ಪ್ರಾಣಕ್ಕೆ ಹಾನಿಯಾಗದಂತೆ ಮಾಧ್ಯಮಗಳು ಎಚ್ಚರವಹಿಸಬೇಕು ಎಂದರು.

ಜಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ವಾರ್ತಾ ಇಲಾಖೆಗೆ ಹೊಸಪೇಟೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಕಳೆದ 25 ವರ್ಷಗಳಿಂದಲೂ ವಾರ್ತಾ ಇಲಾಖೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದಾರೆ. ವಾರ್ತಾ ಇಲಾಖೆ ಜಾಗ ಉಳಿಸಿ ವಾರ್ತಾ ಭವನ ನಿರ್ಮಾಣ ಕಾರ್ಯದಲ್ಲೂ ಇವರ ಸಹಕಾರ ಮಹತ್ತರವಾದುದು ಎಂದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ಲಕ್ಷ್ಮಣ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಉಜ್ಜಿಯಿನಿ ರುದ್ರಪ್ಪ ಆಶಯನುಡಿ ನುಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ ಪತ್ರಕರ್ತರ ಅಹವಾಲು ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಜೆ.ಎಂ. ಶಿವಪ್ರಸಾದ್‌ ಅವರು ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್‌ಗಳನ್ನು ವಿತರಿಸಿದರು.

ಹಿರಿಯ ಪತ್ರಕರ್ತರಾದ ಮಾಧವರಾವ್, ಉಜ್ಜಯಿನಿ ರುದ್ರಪ್ಪ, ಭೀಮಣ್ಣ ಗಜಾಪುರ, ಬುಡ್ಡಿ ಬಸವರಾಜ, ಕೆ.ಉಮಾಪತಿ, ಅಶ್ವತ್ಥ ನಾರಾಯಣ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಅಂಜಲಿ ಭರತ ನಾಟ್ಯ ಕಲಾತಂಡದಿಂದ ನೃತ್ಯ ಪ್ರದರ್ಶನ ನೆರವೇರಿತು. ಪತ್ರಕರ್ತ ಕಿಚಿಡಿ ಕೊಟ್ರೇಶ್‌ ಪುತ್ರಿ ಕೃತಿ ಭರತ ನಾಟ್ಯ ಪ್ರದರ್ಶಿಸಿದರು. ಪತ್ರಕರ್ತರಾದ ಕೃಷ್ಣ ಎನ್‌. ಲಮಾಣಿ, ಬಾಲಕೃಷ್ಣ, ಎಚ್‌. ವೆಂಕಟೇಶ್, ಎಚ್‌. ವೆಂಕಟೇಶ್, ಜಯಪ್ಪ ರಾಠೋಡ್‌, ಪೂರ್ಣಿಮಾ, ರೇಖಾ ಪ್ರಕಾಶ್‌, ಸುರೇಶ್‌ ಚವ್ಹಾಣ್‌, ಮಂಜುನಾಥ ಅಯ್ಯಸ್ವಾಮಿ, ಬಾಬುಕುಮಾರ, ಅನೂಪ್‌, ಸಂಜಯ್ ಕುಮಾರ, ಇಂದಿರಾ ಕಲಾಲ್‌, ಕೆ.ಬಿ. ಖವಾಸ್‌, ಬಸಾಪುರ ಬಸವರಾಜ ಮತ್ತಿತರರಿದ್ದರು.

Share this article