ನರಗುಂದ: ಶ್ರೀ ರಾಮಮಂದಿರ ನಿರ್ಮಾಣವಾದ ಬಳಿಕ ಪಾದಯಾತ್ರೆ ಮೂಲಕ ಅಯೋಧ್ಯೆಗೆ ಬಂದು ಹರಕೆ ತೀರಿಸುತ್ತೇನೆಂದು ಶಪಥ ಮಾಡಿದ್ದ ಪಟ್ಟಣದ ಐವರು ಯುವಕರನ್ನು ಸೋಮವಾರ ಶಾಸಕ ಸಿ.ಸಿ. ಪಾಟೀಲ ಅವರು ಅಯೋಧ್ಯೆಗೆ ಬೀಳ್ಕೊಟ್ಟರು.
ಹರಕೆ ಹೊತ್ತ ಸಂದೀಪ ಸುಬೇದಾರ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಆಗಲೆಂದು ಹದಿನೈದು ವರ್ಷದಿಂದ ತಲೆಗೂದಲನ್ನು ಕತ್ತರಿಸದೇ ಬಿಟ್ಟಿದ್ದೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ಹೀಗಾಗಿ ಕಾಲ್ನಡಿಗೆ ಮೂಲಕ ಹರಕೆ ತೀರಿಸಲು ಅಯೋಧ್ಯೆಗೆ ಹೊರಟಿದ್ದೇವೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಪಟ್ಟಣದ ಸಂದೀಪ ಲಕ್ಷ್ಮಣ ಸುಬೇದಾರ, ಪಂಚಾಕ್ಷರಪ್ಪ ಬೆಳವಟಿಗಿ, ದವನಪ್ಪ ಅರ್ಜುನ ಸಂಬಳ, ಕಿರಣ ಚಂದ್ರಪ್ಪ ಕಲಾಲ ಹಾಗೂ ರುದ್ರಗೌಡ ಹನುಮಂತಗೌಡ ಹಿರೇಗೌಡ್ರ, ಈ ಐವರು ನರಗುಂದದಿಂದ ಕೊಣ್ಣೂರ ಮಾರ್ಗವಾಗಿ ಬಾಗಲಕೋಟೆ, ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಆನಂತರ ಅಯೋಧ್ಯೆಗೆ ತೆರಳಿ, ಆನಂತರ ಕಾಶಿ ವಿಶ್ವನಾಥನ ದರ್ಶನ ಪಡೆಯಲಿದ್ದಾರೆ.ಬೀಳ್ಕೊಡುವ ಸಂದರ್ಭದಲ್ಲಿ ಸಿದ್ಧಲಿಂಗ ಶಿವಾಚಾರ್ಯರು ಶ್ರೀಗಳು, ಶಿವಕುಮಾರ ಶ್ರೀಗಳು, ಶಾಂತಲಿಂಗ ಶ್ರೀಗಳು, ಜಿ.ಟಿ. ಗುಡಿಸಾಗರ, ಚಿದಂಬರಭಟ್ಟರು, ಪಂಚಾಕ್ಷರಪ್ಪ ಬೆಳವಟಿಗಿ, ಶ್ರೀಪಾದ ಭಟ್ಟ, ಕುರುಗೋವಿನಕೊಪ್ಪ, ಮೀನಾಜಿ ಜೋರಾಪುರ, ಲಕ್ಷ್ಮಣ ಸುಬೇದಾರ, ಕೃಷ್ಣ ಮಹಾಲಿನಮನಿ, ಯೋಗೇಶ ಗುಡಾರದ, ರವಿ ಭಜಂತ್ರಿ ಉಪಸ್ಥಿತರಿದ್ದರು.