ಪತ್ರಕರ್ತರು ಸತ್ಯಾಸತ್ಯತೆ ಅರಿತು ಬರೆಯಬೇಕು: ಸಚಿವ ಆರ್.ಬಿ. ತಿಮ್ಮಾಪೂರ

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ಸಮಾಜದ ಬಹುಮುಖ್ಯ ಭಾಗವಾದ ಸಮೂಹ ಮಾಧ್ಯಮದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರು ಸುದ್ದಿ ಬರೆಯುವ ಮುನ್ನ ಸತ್ಯಾಸತ್ಯೆತೆ ಅರಿಯುವುದು ಬಹಳಷ್ಟು ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜದ ಬಹುಮುಖ್ಯ ಭಾಗವಾದ ಸಮೂಹ ಮಾಧ್ಯಮದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರು ಸುದ್ದಿ ಬರೆಯುವ ಮುನ್ನ ಸತ್ಯಾಸತ್ಯೆತೆ ಅರಿಯುವುದು ಬಹಳಷ್ಟು ಮಹತ್ವದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಭಾನುವಾರ ನಡೆದ ಸಮೂಹ ಮಾಧ್ಯಮ: ಸಮಸ್ಯೆ-ಪರಿಹಾರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಧ್ಯಮ ಮನ-ಮನೆಗಳಿಗೆ ಸುದ್ದಿ ತಲುಪಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದು, ಸುಳ್ಳು ಸುದ್ದಿಯಿಂದ ಸಮಾಜದ ಹಾಗೂ ವ್ಯಕ್ತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾಧ್ಯಮ ಇಂದು ದೊಡ್ಡ ದೊಡ್ಡ ಕಂಪನಿಗಳ ಸ್ವತ್ತಾಗಿವೆ. ಅವರ ಕೈಬೊಂಬೆ ರೀತಿಯಲ್ಲಿ ಸುದ್ದಿ ಬರೆಯುವ ವ್ಯವಸ್ಥೆ ಹುಟ್ಟಿಕೊಂಡಿದೆ. ಹೀಗಾಗಿಯೇ ಪತ್ರಕರ್ತರ ಮೇಲಿನ ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾನು ಮೊದಲ ಬಾರಿಗೆ ಶಾಸಕನಾದಾಗ ನನ್ನ ಬೆಂಬಲ ಕೆ.ಎಚ್.ರಂಗನಾಥ ಅವರಿಗಿದೆ ಎಂದು ಸುಳ್ಳು ಸುದ್ದಿ ಬರೆದಿದ್ದರು. ಇದರ ಪರಿಣಾಮ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು ನನ್ನನ್ನು ಅವರ ಅವಧಿ ಮುಗಿಯುವವರೆಗೂ ಕಣ್ಣೆತ್ತಿ ನೋಡಲೇ ಇಲ್ಲ. ಮುಂದೆ ಎದುರಾದ ಚುನಾವಣೆಯಲ್ಲಿ ನಾನು ಸೋಲಬೇಕಾಯಿತು ಎಂದು ನೆನಪಿಸಿಕೊಂಡರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಅವರು, ಸಾಹಿತ್ಯ-ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನರು ಯಾವ ಸುದ್ದಿಯನ್ನು ಇಷ್ಟ ಪಡುತ್ತಾರೆ ಅದೇ ಸುದ್ದಿಗಳನ್ನು ತೋರಿಸುವ ವ್ಯವಸ್ಥೆ ಮಾಧ್ಯಮದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಮಾತನಾಡಿ, ಸಮಾಜದಲ್ಲಿ ಪರಿವರ್ತನೆ ಮಾಡುವ ಜವಾಬ್ದಾರಿ ಹೊಂದಿರುವ ಮಾಧ್ಯಮ ಇಂದು ಕವಲು ದಾರಿಯಲ್ಲಿದೆ. ಯುವ ಪತ್ರಕರ್ತರು ಸ್ಪಷ್ಟವಾಗಿ ಬರೆಯುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಡಾ.ಸಿ.ಎಂ. ಜೋಶಿ ಅವರು, ಪತ್ರಕರ್ತರು ಎಲ್ಲಾ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಿರಬೇಕು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಸಮೂಹ ಮಾಧ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಾರಥ್ಯ ವಹಿಸಿದ್ದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಯುವಪತ್ರಕರ್ತ ಸಂತೋಷ ದೇಶಪಾಂಡೆ ಮಾತನಾಡಿದರು. ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ ವೇದಿಕೆಯಲ್ಲಿದ್ದರು. ಮಾಧ್ಯಮ ಕಾರ್ಯದರ್ಶಿ ಪ್ರಕಾಶ ಗುಳೇದಗುಡ್ಡ ನಿರೂಪಿಸಿದರು. ಮ.ಕೃ.ಮೇಗಾಡೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.

Share this article