ಲಕ್ಷ್ಮೇಶ್ವರ: ಪಟ್ಟಣದ ಮಹಂತಿನ ಮಠದ ರುದ್ರಭೂಮಿಯಲ್ಲಿ ಬೆಳೆದಿದ್ದ ಅಪಾರ ಗಿಡಗಂಟೆಗಳನ್ನು ತೆರವುಗೊಳಿಸಿ, ಸ್ಮಶಾನ ಸ್ವಚ್ಚಗೊಳಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಈ ಬಾರಿಯ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್ಐ ನಾಗರಾಜ ಗಡದ ಮಾತನಾಡಿ, ಸಮಾಜದಲ್ಲಿ ಮೌಲ್ಯನಿಷ್ಠ, ಸ್ವಾಸ್ಥ್ಯ, ಶಾಂತಿ, ಸುವ್ಯವಸ್ಥೆ ಕಾಪಾಡುವ ಮತ್ತು ಪ್ರಸ್ತುತ ಸ್ಫರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗುವ ಪತ್ರಿಕೆಗಳ ಸಂಖ್ಯೆ ಹೆಚ್ಚಬೇಕು, ಪಾಲಕರು ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ವೃತ್ತಿಗೆ ಯಾವುದೇ ಭದ್ರತೆಗಳಲಿಲ್ಲದಿದ್ದರೂ ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಸಾಮಾಜಿಕ ಕಳಕಳಿ ಮತ್ತು ಚಿಂತನೆಗಾಗಿ ತಮ್ಮನ್ನು ಪತ್ರಕರ್ತರು ತೊಡಗಿಸಿಕೊಳ್ಳುತ್ತಿದ್ದಾರೆ, ಅದರಲ್ಲೂ ಲಕ್ಷ್ಮೇಶ್ವರ ತಾಲೂಕು ಪತ್ರಕರ್ತರು ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುತ್ತಿದ್ದಾರೆ ಎಂದರು.
ಗ.ಜಿ. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆನಂದಯ್ಯ ವಿರಕ್ತಮಠ ಮಾತನಾಡಿ, ಸ್ಮಶಾನವೆಂದರೆ ಅದು ಶಿವನ ಮನೆ ಇದ್ದಂತೆ. ಅಂತಹ ಮನೆಯನ್ನು ಸ್ವಚ್ಛಗೊಳಿಸುವ ವಿಶೇಷ ಕಾರ್ಯ ಮಾಡಿದ್ದು ರಾಜ್ಯದಲ್ಲಿಯೇ ಮಾದರಿ ಎನ್ನಬಹುದಾಗಿದೆ ಎಂದರು.ತಾಲೂಕು ಅಧ್ಯಕ್ಷ ಅಶೋಕ ಸೊರಟೂರ ಅಧ್ಯಕ್ಷತೆ ವಹಿಸಿದ್ದರು. ಗದಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಕಡ್ಲಿಮಟ್ಟಿ, ಗುರುರಾಜ ಪಾಟೀಲ ಕುಲಕರ್ಣಿ, ಮುಖ್ಯೋಪಾಧ್ಯಾಯ ಬಸವರಾಜ ಪಟ್ಟೇದ, ಮಲ್ಲಿಕಾರ್ಜುನ ಕಳಸಾಪೂರ ಮುಂತಾದವರು ಉಪಸ್ಥಿತರಿದ್ದರು.
ದಿಗಂಬರ ಪೂಜಾರ ಸ್ವಾಗತಿಸಿದರು, ಸೋಮಣ್ಣ ಯತ್ನಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.