ವಿದ್ಯಾಗಿರಿಯ ಜೆಎಸ್ಸೆಸ್ ಆಂಗ್ಲ ಮಾಧ್ಯಮ ಶಾಲೆಯು ಹೆಣ್ಣು ಮಕ್ಕಳ ಪಾಲಕರು ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿ ಓದಿದ ಸಂದರ್ಭ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾಕಾರ್ಡ್ಸನಲ್ಲಿ ದಾಖಲೆಯಾಗಿದೆ.
ಕನ್ನಡಪ್ರಭ ವಾರ್ತೆ ಧಾರವಾಡ ಕೇವಲ ಅಂಕ ಗಳಿಕೆಯಿಂದ ಮಕ್ಕಳು ಜಾಣರಾಗಲಾರರು. ಅಂಕಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಭಾಗವಹಿಸಬೇಕು. ಅಂದಾಗ ಮಾತ್ರ ಶಿಕ್ಷಣ ಎಂಬುದು ಪರಿಪೂರ್ಣ ಎಂದು ಜೆಎಸ್ಸೆಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಹೇಳಿದರು. ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಮಾತೊಶ್ರೀ ಡಾ. ಹೇಮಾವತಿ ಹೆಗ್ಗಡೆಯವರು ಬರೆದ ಮಗಳಿಗೊಂದು ಪತ್ರ ಪುಸ್ತಕದ 50 ಕಥೆಗಳ ಆಯ್ದ ಭಾಗಗಳನ್ನು ವಿದ್ಯಾಗಿರಿಯ ಜೆಎಸ್ಸೆಸ್ ಆಂಗ್ಲ ಮಾಧ್ಯಮ ಶಾಲೆಯು ಹೆಣ್ಣು ಮಕ್ಕಳ ಪಾಲಕರು ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿ ಓದಿದ ಸಂದರ್ಭ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾಕಾರ್ಡ್ಸನಲ್ಲಿ ದಾಖಲೆಯಾಗಿದ್ದು, ಅದರ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ಪ್ರದಾನದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ನಾವು ಯಾವ ರೀತಿಯ ಸಂಸ್ಕಾರಗಳನ್ನು ಕಲಿಸುತ್ತೇವೆಯೋ ಅಂತಹ ಸಂಸ್ಕಾರಗಳನ್ನು ಮಕ್ಕಳು ಕಲಿಯುತ್ತವೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಮಾಹಿತಿ ಇರುವದಿಲ್ಲ. ಅದನ್ನು ತಿಳಿಹೇಳಬೇಕಾದದ್ದು, ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ. ಪಾಲಕರು ತಮ್ಮ ಮಕ್ಕಳ ಲಾಲನೆ, ಪಾಲನೆಗಾಗಿ ಸಮಯವನ್ನು ತೆಗೆದಿಡುವುದು ಅತಿ ಅವಶ್ಯಕ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ದೊರೆಯಬೇಕು ಎಂದರು. ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ನಿಂದ ಪಡೆದ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಶಾಲೆಯ ಪ್ರಾಚಾರ್ಯರಾದ ಉಷಾ ಸಂತೋಷ ಅವರಿಗೆ ಹಸ್ತಾಂತರಿಸಿದರು. ಐ.ಟಿ.ಐ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಸಂಯೋಜಕರಾದ ನಿರ್ಮಲಾ ಪಾಟೀಲ್, ಸಾವಿತ್ರಿ ಗಾತಾಡೆ ಹಾಗೂ ಕಮಲಾಕ್ಷಿ ಸಣ್ಣಕ್ಕಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.