ಕನ್ನಡಪ್ರಭ ವಾರ್ತೆ ಮೈಸೂರುನಿರ್ದಿಷ್ಟ ಗುರಿ, ದೃಢ ಸಂಕಲ್ಪವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಟಿ. ರಮ್ಯಾ ತಿಳಿಸಿದರು.ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.ಇಂದು ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ನಿರ್ದಿಷ್ಟ ಗುರಿ, ದೃಢ ಸಂಕಲ್ಪವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಯಾವ ಕೋರ್ಸ್ ಆಯ್ಕೆ ಮಾಡಿದರೆ ಉದ್ಯೋಗ ಪಡೆಯಬಹುದು ಎಂಬ ಪ್ರಶ್ನೆಗಳಿಗೆ ಗುರುಹಿರಿಯರ ಮಾರ್ಗದರ್ಶನ, ಪೋಷಕರ ಬೆಂಬಲ ಬಹಳ ಮುಖ್ಯ. ಎಂಬುದನ್ನು ಮನವರಿಕೆ ಮಾಡಿದರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕಾಲ ಹರಣ ಮಾಡದೆ ಅದನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಾಹಿತಿಗಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಬದುಕು ಸುಂದರವಾಗುವಲ್ಲಿ ಶೈಕ್ಷಣಿಕ ಹಂತದಲ್ಲಿ ನಾವು ಪಡೆಯುವ ಅತ್ಯುನ್ನತ ಸ್ಥಾನ ಕೂಡ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆಯುವುದು ಸಾಮಾನ್ಯ. ಆದರೆ ಇಂದು ಮಾನವಿಕ ಜಗತ್ತನ್ನು ನಿರ್ಮಿಸುವ ಕಲಾ ವಿಭಾಗದಲ್ಲಿ ಬಹಳ ಸಂಖ್ಯೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವುದು ವಿಶೇಷವಾಗಿದೆ ಎಂದರು.ಯಶಸ್ಸು ಗಳಿಸಲು ನಮಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ಪೂರ್ತಿ, ಪ್ರೇರಣೆ ನೀಡಿದವರನ್ನು ನೆನೆದುಕೊಳ್ಳುವುದು ಬಹಳ ಮುಖ್ಯ. ಆಮೆ ಮತ್ತು ಮೊಲದ ಕಥೆಯನ್ನು ಹೇಳುವ ಮೂಲಕ ನಮ್ಮ ಗುರಿ ಸಾಧನೆಯಾಗುವವರೆಗೂ ಮೈಮರೆಯಬಾರದು ಎಂಬುದನ್ನು ಅರ್ಥೈಸಿದರು. ಶ್ರೀಗಳ ದೂರ ದೃಷ್ಟಿಯಂತೆ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಭೌದ್ಧಿಕ ಸಾಮರ್ಥ್ಯ ಹೊಂದಿ ಸಮಾಜಮುಖಿಯಾಗುವ ಮೂಲಕ ಸಾರ್ಥಕ ಜೀವನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.ಕಲಾ ವಿಭಾಗದಲ್ಲಿ 600ಕ್ಕೆ 591 ಅಂಕಗಳಿಸಿ ರಾಜ್ಯಕ್ಕೆ 8ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಬಿ.ಎಸ್. ಮಾನ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿ ಪಡೆದ 107 ವಿದ್ಯಾರ್ಥಿನಿಯರಿಗೆ ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಟಿ. ಗುರುಪಾದಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ ಹಾಗೂ ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕಿ ಎಸ್. ಮಂಜುಳಾ ಇದ್ದರು.ಪ್ರತಿಭಾ ಪುರಸ್ಕೃತರಾದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳಲ್ಲಿ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿನಿಯರಿಗೆ ವಿಶೇಷ ಗೌರವ ಸಿಗುತ್ತದೆ. ಶಿಕ್ಷಣದ ಜೊತೆಗೆ ಬದುಕಿನ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅವಕಾಶವನ್ನು ಸಂಸ್ಥೆಯು ಕಲ್ಪಸಿಕೊಟ್ಟಿದೆ ಎಂದರು.ಬಿ.ಕೆ. ದೇವಕಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಎಂ.ಎಸ್. ನಟರಾಜು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಎಸ್. ಮಂಜುಳಾ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಟಿ.ಎಸ್. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.