ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ನ ಸ್ಕಂದಾ ಲೇಔಟ್ ಬಳಿ ವಡ್ಡರದೊಡ್ಡಿ ಪಿ.ಎನ್.ಅರುಣ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲಾ7 ಮಂದಿ ಆರೋಪಿಗಳನ್ನು ಮಂಗಳವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಾದ ನಿಡಘಟ್ಟ ಗ್ರಾಮದ ಎನ್.ಎಸ್.ವಿಕಾಸ್, ಹನುಮಂತಪುರದ ಎಚ್.ಆರ್.ಭರತ್ ಗೌಡ, ಎಚ್.ಆರ್.ನಿತ್ಯಾನಂದ, ಎಚ್. ಆರ್.ಹೇಮಂತ, ಯರಗನಹಳ್ಳಿಯ ವೈ.ಕೆ.ಚಂದನ್, ಹೆಮ್ಮನಹಳ್ಳಿಯ ಎಚ್.ಎಸ್.ಕುಮಾರ ಹಾಗೂ ಎಚ್.ಎಸ್.ಶ್ರೀನಿವಾಸ ಅವರನ್ನು ಮಂಗಳವಾರ ಸಂಜೆ ಮಂಡ್ಯ ಜಿಲ್ಲಾ 5ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಮಂಜುಳಾ ಈಟ್ಟಿ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಅರುಣನ ಕೊಲೆ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಗೌಡ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸರ ತಂಡ ರಚಿಸಲಾಗಿತ್ತು.ಮದ್ದೂರು, ಕೆಸ್ತೂರು, ಬೆಸಗರಹಳ್ಳಿ ಪೊಲೀಸ್ ಠಾಣೆಗಳ ಪಿಎಸ್ಐ ಮಂಜುನಾಥ್, ಶ್ರವಣ ದಾಸ ರೆಡ್ಡಿ, ಎಸ್.ಪ್ರಕಾಶ್ ಸಿಬ್ಬಂದಿ ಚಿರಂಜೀವಿ ಪೂಜಾರ್, ರಮೇಶ್, ಎಚ್. ಎಸ್. ಪ್ರಶಾಂತ್, ವಿಠ್ಠಲ್ ಕರಿಗಾರ್, ಪ್ರಶಾಂತ್ ಕುಮಾರ್, ವಿಷ್ಣುವರ್ದನ, ಪ್ರಸನ್ನ ಹಾಗೂ ರಜತ್ ಅವರ ತಂಡ ಅರುಣ್ ಹತ್ಯೆಯಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವಿಚಾರಣೆ ನಂತರ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಂಗಳವಾರ ಘಟನೆ ನಡೆದ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾಯಿತು. ಬಳಿಕ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬಂಧಿತ ಎಲ್ಲಾ ಆರೋಪಿಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ನೆರೆದಿದ್ದ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.