- ಹೊನ್ನಾಳಿಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತದ ಪುರಾತನ ಹಾಗೂ ಸಮತೋಲಿತ ಆಹಾರ ಪದ್ಧತಿಯನ್ನು ನಿರ್ಲಕ್ಷಿಸಿ ಪಾಶ್ಚಾತ್ಯರಂತೆ ಜಂಕ್ ಫುಡ್ ಸಂಸ್ಕೃತಿಗೆ ನಮ್ಮ ಯುವಜನತೆ ಬಲಿ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಅಭಿಪ್ರಾಯಪಟ್ಟರು.ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟ್ ಹಾಗೂ ತುಂಗಭದ್ರಾ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ಜನನಿ ಆಸ್ಪತ್ರೆ ಆಯೋಜಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮತೋಲಿತ ಆಹಾರ ಸೇವನೆ ಹಾಗೂ ಜೀವನ ಶಿಸ್ತನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ರೋಗ ಬಂದ ಬಳಿಕ ಆಸ್ಪತ್ರೆಗಳಿಗೆ ಅಲೆಯುವ ಬದಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು, ಆರೋಗ್ಯ ವರ್ಧನೆ ಮಾಡಿಕೊಳ್ಳುವುದು ಅಗತ್ಯ. ವೈದ್ಯಕೀಯ ಚಿಕಿತ್ಸೆಗಳು ದುಬಾರಿ ಆಗಿರುವ ಇಂದಿನ ಕಾಲಘಟ್ಟದಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಹೇಳಿದರು.ಜನನಿ ಸಂಸ್ಥೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಪ್ರಕೃತಿ ಚಿಕಿತ್ಸೆ ಎಂದರೆ ನಮ್ಮ ಮರೆತುಹೋಗಿರುವ ಜೀವನಕ್ರಮ ಮತ್ತೆ ನೆನಪಿಸುವುದು. ಪಂಚಭೂತಗಳಿಂದ ರಚನೆ ಆಗಿರುವ ಶರೀರಕ್ಕೆ ಅಸ್ವಸ್ಥತೆ ಕಾಡಿದಾಗ ಅದರ ಚಿಕಿತ್ಸೆಯೂ ಪಂಚಭೂತಗಳಲ್ಲೇ ಅಡಗಿದೆ ಎಂಬ ಮೂಲತತ್ವ ಆಧರಿಸಿದ ಈ ಚಿಕಿತ್ಸಾ ಪದ್ಧತಿ ಇತರ ಎಲ್ಲ ವೈದ್ಯಪದ್ಧತಿಗಳಿಗೆ ಪೂರಕ ಎಂದು ವಿಶ್ಲೇಷಿಸಿದರು.
ಹಿರೇಕಲ್ಮಠದ ಪೀಠಾಧ್ಯಕ್ಷ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿದ ಶ್ರೀಗಳು, ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ನಮ್ಮ ಇಂಥ ಪುರಾತನ ವೈದ್ಯಪದ್ಧತಿಯನ್ನು ಉಳಿಸಿ, ಬೆಳೆಸುವ ಜತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.ತುಂಗಭದ್ರಾ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ತರಗನಹಳ್ಳಿ, ಕಾರ್ಯದರ್ಶಿ ಬಸವರಾಜ ಬಲಮುರಿ, ಖಜಾಂಚಿ ವಿನಾಯಕ ಶೆಟ್ಟರು, ಸದಸ್ಯರಾದ ಶಿವಕುಮಾರ್ ಚಕ್ಕಡಿ, ಮುರುಗೇಶ್ ತರಗನಹಳ್ಳಿ, ಯೋಗ ಪ್ರಾಧ್ಯಾಪಕ ಜಯರಾಂ ಮತ್ತಿತರರು ಉಪಸ್ಥಿತರಿದ್ದರು. ತಜ್ಞ ವೈದ್ಯ ಡಾ.ರಾಜೇಶ್ ಪಾದೇಕಲ್ ನೇತೃತ್ವದಲ್ಲಿ ಡಾ.ನಿಶ್ಚಿತ್, ಡಾ.ಮಾನಸ, ಡಾ.ಅಭಿರಾಮಿ, ಡಾ.ಯಶಸ್ವಿ ತಪಾಸಣೆ ನೆರವೇರಿಸಿದರು. 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.
- - --12ಎಚ್.ಎಲ್.ಐ1:
ಉಚಿತ ಯೋಗ- ಪ್ರಕೃತಿ ಶಿಬಿರ ಉದ್ಘಾಟನೆಯನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.