ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿಕೆ
ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ದಲಿತ ಸಮುದಾಯಕ್ಕೂ ಬಿಜೆಪಿ ನ್ಯಾಯ ನೀಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ನಲ್ಲಿ ನಾರಾಯಣಸ್ವಾಮಿ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ನಮ್ಮ ಸಮುದಾಯದಲ್ಲಿ ಖುಷಿ ತರಿಸಿದೆ. ಇದು ೧.೦೭ ಕೋಟಿ ಪರಿಶಿಷ್ಟ ಸಮುದಾಯಕ್ಕೆ ಖುಷಿ ಕೊಟ್ಟಿರುವ ವಿಷಯವಾಗಿದೆ. ಬಿಜೆಪಿ ಬಗ್ಗೆ ಕೋಮುವಾದಿ ಪಕ್ಷ ಎಂದು ಟೀಕೆ ಮಾಡುತ್ತಿದ್ದವರು ಈಗ ಇದನ್ನು ನೋಡಿ ಬಾಯಿ ಬಡಿದುಕೊಳ್ಳುವಂತಾಗಿದೆ. ಬಿಜೆಪಿ ಕೋಮವಾದಿ ಅಲ್ಲ ಎನ್ನುವುದಕ್ಕೆ ಈ ನೇಮಕವೇ ಸಾಕ್ಷಿಯಾಗಿದೆ ಎಂದರು.ಕಾಂಗ್ರೆಸ್ ಸರ್ಕಾರ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತಲ್ಲೀನವಾಗಿದೆ. ಅವರಿಗೆ ಜನರ ರಕ್ಷಣೆಯ ಬಗ್ಗೆ ಕಾಳಜಿಯಿಲ್ಲ. ಪರಿಶಿಷ್ಟರ ಬಗ್ಗೆ ಕಾಳಜಿ ಇಲ್ಲ. ಪರಿಶಿಷ್ಟರ ಮೇಲೆ ಸುಳ್ಳು ದೂರು ದಾಖಲಿಸುವ ಕೆಲಸ ಈ ಸರ್ಕಾರದಿಂದ ನಡೆದಿದೆ. ಇವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.
ಮುಖಂಡರಾದ ಸುಂಕಪ್ಪ ಮಾಲಗಿತ್ತಿ, ಸಣ್ಣ ಕನಕಪ್ಪ ಛಲವಾದಿ, ಲಿಂಗರಾಜ ಕಟ್ಟಿಮನಿ, ಲಕ್ಷ್ಮಣ ಪೂಜಾರ ಉಪಸ್ಥಿತರಿದ್ದರು.