ಕೆ.ಆರ್.ಪೇಟೆ: ಶಾಂತಿಯುತವಾಗಿ ನಡೆದ ಮಹಾಗಣಪತಿ ವಿಸರ್ಜನಾ ಮೆರವಣಿಗೆ

KannadaprabhaNewsNetwork |  
Published : Oct 05, 2025, 01:00 AM IST
4ಕೆಎಂಎನ್ ಡಿ15,16,17 | Kannada Prabha

ಸಾರಾಂಶ

ಮೆರವಣಿಗೆಯಲ್ಲಿ ಕೇರಳದಿಂದ ಚಂಡೆ ವಾದಕರು ಸೇರಿದಂತೆ ವಿಶೇಷ ಜಾನಪದ ಕಲಾ ತಂಡಗಳು ಆಗಮಿಸಿದ್ದು, ತಮ್ಮ ಕಲಾ ಪ್ರದರ್ಶನದ ಮೂಲಕ ಜನರಿಗೆ ಮನರಂಜನೆ ನೀಡಿದವು. ಮೆರವಣಿಗೆ ಯುದ್ದಕ್ಕೂ ಸಾವಿರಾರು ಯುವಕರು ಕೇಸರಿ ಶಾಲು ಧರಿಸಿ ಡಿಜೆ ಸೌಂಡಿಗೆ ತಕ್ಕಂತೆ ಕುಣಿಯುತ್ತ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಿಂದೂ ಧರ್ಮಧ್ವಜ ಸಮಿತಿಯಿಂದ ಪಟ್ಟಣದ ಮುಖ್ಯ ರಸ್ತೆಯ ಬಳಿ ಪ್ರತಿಷ್ಠಾಪಿಸಿದ್ದ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಪಟ್ಟಣದಲ್ಲಿ ಅದ್ಧೂರಿ ಹಾಗೂ ಶಾಂತಿಯುತವಾಗಿ ನಡೆಯಿತು.

ಮಹಾಗಣಪತಿ ಮೆರವಣಿಗೆಗೂ ಮುನ್ನ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ಪತ್ನಿ ರಮಾರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಗಣಪತಿ ವಿಸರ್ಜನಾ ಮೆರವಣಿಗೆ 850ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದ ಗಣಪತಿ ಪ್ರತಿಷ್ಠಾಪನಾ ಸ್ಥಳದಿಂದ ಪ್ರವಾಸಿ ಮಂದಿರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಾಂತಿಯುತವಾಗಿ ಸಾಗಿತು.

ಮೆರವಣಿಗೆಯಲ್ಲಿ ಕೇರಳದಿಂದ ಚಂಡೆ ವಾದಕರು ಸೇರಿದಂತೆ ವಿಶೇಷ ಜಾನಪದ ಕಲಾ ತಂಡಗಳು ಆಗಮಿಸಿದ್ದು, ತಮ್ಮ ಕಲಾ ಪ್ರದರ್ಶನದ ಮೂಲಕ ಜನರಿಗೆ ಮನರಂಜನೆ ನೀಡಿದವು. ಮೆರವಣಿಗೆ ಯುದ್ದಕ್ಕೂ ಸಾವಿರಾರು ಯುವಕರು ಕೇಸರಿ ಶಾಲು ಧರಿಸಿ ಡಿಜೆ ಸೌಂಡಿಗೆ ತಕ್ಕಂತೆ ಕುಣಿಯುತ್ತ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಶಾಸಕ ಎಚ್.ಟಿ.ಮಂಜು ಅವರು ಕೂಡ ಯುವಕರೊಂದಿಗೆ ಸೇರಿ ಕುಣಿತಕ್ಕೆ ಸಾಥ್ ನೀಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಸಕರನ್ನು ಯುವಕರು ಹೆಗಲ ಮೇಲೆ ಹೊತ್ತು ಜೈಕಾರ ಕೂಗಿ ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು. ಯುವತಿಯರೂ ಕೂಡ ತಮಟೆ ಸದ್ದಿಗೆ ಕುಣಿತು ಹರ್ಷ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ನಾಗಮಂಗಲ, ಮದ್ದೂರಿನ ಗಲಭೆ ನಂತರ ಪಟ್ಟಣ ಪೊಲೀಸರು ಮುನ್ನೆಚ್ಚರಿಕಾ ಕ್ರಮ ವಹಿಸಿ ಕಟ್ಟು ನಿಟ್ಟಿನ ರಕ್ಷಣಾ ವ್ಯವಸ್ಥೆ ಮಾಡಿದ್ದರು.

ಗಣೇಶ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಇಬ್ಬರು ಎಎಸ್ಪಿ, ನಾಲ್ವರು ಡಿವೈಎಸ್ಪಿ, 10 ಪಿಐ, 10 ಪಿಎಸ್ ಐ, 30 ಎಎಸ್ ಐ ಸೇರಿದಂತೆ 850ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಕೋಮು ಸೌಹಾರ್ದತೆ ಅಂಗವಾಗಿ ಕಳೆದ ವಾರ ಪಟ್ಟಣದ ಮುಸ್ಲಿಮರು ಮಹಾಗಣಪತಿಗೆ ವಿಶೇಷ ಪ್ರಜೆ ಸಲ್ಲಿಸಿ ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದರು. ಆದರೂ ಪಟ್ಟಣ ಪೊಲೀಸರು ಮುಖ್ಯ ರಸ್ತೆಯ ಮಸೀದಿ ಬಳಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಿದ್ದರು.

ಪಟ್ಟಣದಾದ್ಯಂತ ಗಣೇಶ ಮೂರ್ತಿಯ ಸುಗಮ ಮೆರವಣಿಗೆಗಾಗಿ ಖಾಕಿ ಕಣ್ಗಾವಲು ಹಾಕಿ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಮಸೀದಿ, ಸೇರಿ ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ತುಕಡಿಗಳ ನಿಯೋಜನೆ ಮಾಡಲಾಗಿತ್ತು.

ಸಂಜೆ ಪಟ್ಟಣದ ಹೊರವಲಯದ ದೇವೀರಮ್ಮಣಿ ಕೆರೆಯಲ್ಲಿ ಮಹಾ ಗಣಪತಿಯ ವಿಸರ್ಜನೆ ನಡೆಯಿತು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’