ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರವೀಂದ್ರ ಶ್ರೀಕಂಠಯ್ಯ ಅವರ ನಿವಾಸಕ್ಕೆ ತೆರಳಿದ ಗ್ರಾಪಂ ಸದಸ್ಯೆ ಸುಧಾ, ಮಾಜಿ ಉಪಾಧ್ಯಕ್ಷ ಹೇಮಂತ್ ಕುಮಾರ್, ಮುಖಂಡರಾದ ನಾರಾಯಣ, ಮೋಹನ್, ತಿರುಪಾಲ ಸೇರಿ ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಹೇಮಂತ್ ಕುಮಾರ್, ಗ್ರಾಮದ ಬಡ ಜನತೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ನೀಡಿದ್ದ ಹಕ್ಕು ಪತ್ರಗಳ ಖಾತೆ ಮಾಡದೆ ಹಾಲಿ ಶಾಸಕರು ಬಡ ಜನತೆಗೆ ಇಲ್ಲಸಲ್ಲದ ಸಬೂಬು ಹೇಳಿ ಖಾತೆ ಮಾಡಿಕೊಡುತ್ತಿರಲಿಲ್ಲ. ಇದರಿಂದ ನೂರಾರು ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ ಎಂದು ಅವರಿಗೆ ಮನವರಿಕೆ ಮಾಡಿದ್ದರೂ ಸಹ ಅವರು ಸ್ಪಂದನೆ ಮಾಡುತ್ತಿಲ್ಲ. ಇವರ ನಡೆಗೆ ಬೇಸತ್ತು ಜೆಡಿಎಸ್ ಸೇರ್ಪಡೆ ಯಾಗುತ್ತಿದ್ದೇನೆ ಎಂದರು.ಹಲವು ವರ್ಷಗಳಿಂದ ಶಾಸಕ ರಮೇಶ ಬಂಡಿಸಿದ್ದೇಗೌಡರ ಜೊತೆ ಕಟ್ಟಾ ಬೆಂಬಲಿಗನಾಗಿ ಕೆಲಸ ಮಾಡಿದ್ದು, ಅವರು ಯಾವ ಪಕ್ಷದಲ್ಲಿದ್ದರೂ ಗ್ರಾಮದಲ್ಲಿ ಅವರಿಗಾಗಿ ಕೆಲಸ ಮಾಡಿದ್ದೇನೆ. ಆದರೆ, ಶಾಸಕರು ಕೇವಲ ದ್ವೇಷದ ರಾಜಕಾರಣ ಮಾಡುತ್ತಿದ್ದು ಗ್ರಾಮದಲ್ಲಿ ಯಾವ ಮುಖಂಡರ ಸಮಸ್ಯೆಗಳಿಗೂ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಪಾಪಣ್ಣ, ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್, ನರಸಿಂಹ, ಸದಸ್ಯರಾದ ಮಂಜುನಾಥ್.ಸಿ., ರಾಜು.ಕೆ., ಮುಖಂಡರಾದ ಮಹದೇವು, ರಾಜು.ಪಿ., ಆನಂದ, ರವಿನಾರಾಯಣ, ಯೋಗೇಶ್, ಹರೀಶ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಜೊತೆಯಲ್ಲಿದ್ದರು.