ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಅನ್ನದಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ.ವಿಶ್ವೇಶ್ವರಯ್ಯ ಅವರಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸಿದ ಕೆ.ವಿ.ಶಂಕರಗೌಡ ಹಾಗೂ ಡಾ.ಜಿ.ಮಾದೇಗೌಡರು ಜಿಲ್ಲೆಯ ಧ್ರುವತಾರೆಗಳಾಗಿದ್ದಾರೆ ಎಂದರು.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿದರೆ ಮುಂದೆ ಸಮಾಜದ ಜವಾಬ್ದಾರಿಗಳನ್ನು ಅರಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ವಿದ್ಯಾರ್ಥಿ ನಾಯಕನು ತನ್ನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಶಿಕ್ಷಕರು ಹಾಗೂ ಸಹಪಾಠಿಗಳ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಶಿಸ್ತು ಮತ್ತು ಉತ್ತಮ ನಡವಳಿಕೆ ನಾಯಕತ್ವದ ಮೂಲ ಅಂಶಗಳಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಹಪಾಠಿಗಳನ್ನು ಜೊತೆಯಲ್ಲಿ ಕರೆದುಕೊಂಡು ಸಾಗುವ ವ್ಯಕ್ತಿಯೇ ಉತ್ತಮ ನಾಯಕನಾಗಲು ಸಾಧ್ಯ. ಕೂಡಿ ಬಾಳಿದರೆ ಸ್ವರ್ಗಸುಖ ಎಂಬ ಗಾದೆ ನಮ್ಮ ಜೀವನದಲ್ಲಿ ಸಹಬಾಳ್ವೆ ಮತ್ತು ಸಹಕಾರದ ಮಹತ್ವವನ್ನು ಸಾರುತ್ತದೆ. ನಾಯಕತ್ವದಿಂದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಸಂಘಟನಾ ಶಕ್ತಿ, ಆತ್ಮವಿಶ್ವಾಸ, ವೇದಿಕೆ ಭಯ ನಿವಾರಣೆ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ ಎಂದು ಹೇಳಿದರು.
ರೈತ ಬಿತ್ತಿದ ಎಲ್ಲಾ ಬೀಜಗಳೂ ಫಲ ನೀಡುವುದಿಲ್ಲ. ಅದೇ ರೀತಿ ಶಿಕ್ಷಕರು ಬೋಧಿಸಿದ ವಿಷಯವನ್ನು ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿ ಅರ್ಥಮಾಡಿಕೊಳ್ಳುವುದಿಲ್ಲ. ಜ್ಞಾನ ಸಂಪಾದಿಸಿದವರು ಸಮಾಜದಲ್ಲಿ ಸನ್ಮಾನಿತರಾಗುತ್ತಾರೆ. ವ್ಯಕ್ತಿಯ ಮೌಲ್ಯವೂ ಅವನ ವ್ಯಕ್ತಿತ್ವ, ಸಾಧನೆ ಮತ್ತು ಸಮರ್ಪಣೆಯಿಂದ ನಿರ್ಧಾರವಾಗುತ್ತದೆ ಎಂದು ವಿವರಿಸಿದರು.