ಹೊಸಪೇಟೆ: ಕಬೀರರು ಎಲ್ಲ ಧರ್ಮಗಳಿಗೂ ಸೇರಿದ ಮಹಾನ್ ಸಂತರು. ಅವರು ಕಾಯಕ ನಿಷ್ಠರು, ಯಾವುದೇ ಧರ್ಮದಲ್ಲಿರುವ ಮೂಢನಂಬಿಕೆಗಳನ್ನು ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ರಾಜಕೀಯ, ಸಾಮಾಜಿಕ, ಕೌಟುಂಬಿಕ ಹಾಗೂ ಧಾರ್ಮಿಕ ಅಂಶಗಳು ಕಬೀರರ ಚಿಂತನೆಗೆ ಹಿನ್ನೆಲೆಯಾದವು. ಅವರ ದೋಹೆಗಳು ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಹರಡುತ್ತಾ ಜನಮನಗಳಲ್ಲಿ ಜೀವಂತವಾಗಿವೆ. ಅವರ ದೋಹೆಗಳು ಸಮಾಜದಲ್ಲಿ ಸತ್ಯ, ಸರಳತೆ ಮತ್ತು ಏಕತೆಯನ್ನು ಸಾರುವ ಶಕ್ತಿಯುತ ಸಾಧನಗಳಾಗಿವೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸಲು ಕಬೀರರ ಸಂದೇಶಗಳು ಮಾರ್ಗದರ್ಶಕವಾಗಿವೆ ಎಂದು ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಜಾತಿ ಹಾಗೂ ಧರ್ಮಗಳ ಹೆಸರಿನಲ್ಲಿ ಗೋಡೆಗಳನ್ನು ನಿರ್ಮಿಸಿ ವಿಭಜನೆಯ ದಾರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನು ಏಕತೆಯ ಕಡೆಗೆ ನಡೆಸುವ ಮಹಾನ್ ಚಿಂತಕರಲ್ಲಿ ಕಬೀರರು ಪ್ರಮುಖರು ಎಂದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿಯ ಹಿರಿಯ ಸಂಶೋಧನಾ ಅಧಿಕಾರಿ ಡಾ.ಕೆ. ಪ್ರೇಮಕುಮಾರ, ಸಂತ ಕಬೀರ: ದೇವರು, ಧರ್ಮ ಮತ್ತು ಸಮಾಜ'''''''''''''''' ಎಂಬ ವಿಷಯ ಕುರಿತು ಮಾತನಾಡಿ, ಕಬೀರರು ಪಾರಂಪರಿಕ ಶಿಕ್ಷಣವನ್ನು ಹೊಂದಿರದಿದ್ದರೂ ಸಾಧು-ಸಂತರರಿಂದ ಆಳವಾದ ಜ್ಞಾನ ಮತ್ತು ಗ್ರಹಿಕೆಯನ್ನು ಸಂಪಾದಿಸಿದರು. ನಾನು ಹಿಂದೂ ಅಲ್ಲ, ಮುಸ್ಲಿಂ ಅಲ್ಲ ಎನ್ನುವ ಮೂಲಕ ಕಬೀರರು ಧರ್ಮಾತೀತ ಚಿಂತನೆಗಳನ್ನು ವ್ಯಕ್ತಪಡಿಸಿದರು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಂಚಾಲಕ ಡಾ.ವೆಂಕಟಗಿರಿ ದಳವಾಯಿ, ಹಿರೇಹಾಳ್ ಇಬ್ರಾಹಿಂ ಫೌಂಡೇಶನ್ ಅಧ್ಯಕ್ಷ ಎಚ್.ಇ. ದಾದಾ ಕಲಂದರ್ ಉಪಸ್ಥಿತರಿದ್ದರು.