ಮೈನಿಂಗ್‌ ಲಾರಿಗಳ ತಡೆದು ಕಡ್ಲೇಗುದ್ದು ಗ್ರಾಮಸ್ಥರಿಂದ ಧರಣಿ

KannadaprabhaNewsNetwork | Updated : Oct 20 2023, 01:01 AM IST

ಸಾರಾಂಶ

ಸಿರಿಗೆರೆ ಸಮೀಪದ ಗಾದ್ರಿ ಗುಡ್ಡ ಪ್ರದೇಶದಲ್ಲಿ ಗಣಿಗಾರಿಗೆ ನಡೆಸುತ್ತಿರುವ ವೇದಾಂತ ಮತ್ತು ಜಾನ್‌ ಮೈನ್ಸ್‌ ಅದಿರು ಕಂಪನಿಗಳಿಂದ ಕಡ್ಲೇಗುದ್ದು ಗ್ರಾಮಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದು, ಗ್ರಾಮದೊಳಗೆ ಮೈನ್ಸ್‌ ತುಂಬಿದ ಲಾರಿಗಳು ಪ್ರವೇಶ ಮಾಡಕೂಡದೆಂದು ಬಿಗಿಪಟ್ಟು ಹಿಡಿದು ಧರಣಿ ನಿರತರಾಗಿದ್ದಾರೆ.ಇದರಿಂದಾಗಿ ಕಡ್ಲೇಗುದ್ದು ಗ್ರಾಮದ ಉದ್ದಕ್ಕೂ ಮೈನಿಂಗ್‌ ಲಾರಿಗಳು ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಂತಿವೆ. ಅದಿರು ಸಾಗಾಣಿಕೆಯಿಂದ ಜನ ರೋಸಿ ಹೋಗಿದ್ದಾರೆ. ಜನ, ಜಾನುವಾರು ಮತ್ತು ಬೆಳೆಗಳ ಮೇಲೆ ಹೇಳಲಾಗದ ದುಷ್ಪರಿಣಾಮ ಉಂಟಾಗುತ್ತಿರುವುದರಿಂದ ಮೈನಿಂಗ್‌ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಗ್ರಾಮಸ್ಥರ ನಿರ್ಧಾರವಾಗಿದೆ.

ಗ್ರಾಮದೊಳಗೆ ಲಾರಿ ಪ್ರವೇಶ ನಿಷೇಧಕ್ಕೆ ಪಟ್ಟು । ಕುಡಿಯುವ ನೀರು ವಿಷಮುಕ್ತ । ಜನ, ಜಾನುವಾರುಗಳ ಮೇಲೆ ದುಷ್ಪರಿಣಾಮದ ಆರೋಪ

ಕನ್ನಡಪ್ರಭ ವಾರ್ತೆ ಸಿರಿಗೆರೆಸಿರಿಗೆರೆ ಸಮೀಪದ ಗಾದ್ರಿ ಗುಡ್ಡ ಪ್ರದೇಶದಲ್ಲಿ ಮೈನಿಂಗ್‌ ನಡೆಸುತ್ತಿರುವ ವೇದಾಂತ ಮತ್ತು ಜಾನ್‌ ಮೈನ್ಸ್‌ ಅದಿರು ಕಂಪನಿಗಳಿಂದ ಕಡ್ಲೇಗುದ್ದು ಗ್ರಾಮಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದು, ಗ್ರಾಮದೊಳಗೆ ಮೈನ್ಸ್‌ ತುಂಬಿದ ಲಾರಿಗಳು ಪ್ರವೇಶ ಮಾಡಕೂಡದೆಂದು ಬಿಗಿಪಟ್ಟು ಹಿಡಿದು ಧರಣಿ ನಿರತರಾಗಿದ್ದಾರೆ.ಇದರಿಂದಾಗಿ ಕಡ್ಲೇಗುದ್ದು ಗ್ರಾಮದ ಉದ್ದಕ್ಕೂ ಮೈನಿಂಗ್‌ ಲಾರಿಗಳು ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಂತಿವೆ. ಅದಿರು ಸಾಗಾಣಿಕೆಯಿಂದ ಜನ ರೋಸಿ ಹೋಗಿದ್ದಾರೆ. ಜನ, ಜಾನುವಾರು ಮತ್ತು ಬೆಳೆಗಳ ಮೇಲೆ ಹೇಳಲಾಗದ ದುಷ್ಪರಿಣಾಮ ಉಂಟಾಗುತ್ತಿರುವುದರಿಂದ ಮೈನಿಂಗ್‌ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಗ್ರಾಮಸ್ಥರ ನಿರ್ಧಾರವಾಗಿದೆ. ಮೆದಿಕೆರಿಪುರ ಗುಡ್ಡದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಿ ಕಂಪನಿಗಳು ಮೇಗಳಹಳ್ಳಿ, ಕಡ್ಲೇಗುದ್ದು, ಬೊಮ್ಮೇನಹಳ್ಳಿ ಗ್ರಾಮಗಳ ಮೂಲಕ ಸಂಚಾರಿಸುತ್ತವೆ. ಕಿರಿದಾದ ಕಡ್ಲೇಗುದ್ದು ಮತ್ತು ಬೊಮ್ಮೇನಹಳ್ಳಿಯ ರಸ್ತೆಗಳಲ್ಲಿ ಓಡಾಟವೇ ತ್ರಾಸದಾಕವಾಗಿದ್ದರೂ ನಿತ್ಯವೂ ನೂರಾರು ಲಾರಿಗಳು ಸಂಚರಿಸುತ್ತವೆ. ಅವುಗಳಿಗೆ ಈಗ ಹೊಸ ಸೇರ್ಪಡೆ ಎಂಬಂತೆ ಮತ್ತೆ ೪೦ ಲಾರಿಗಳಿಗೆ ಅನುಮತಿ ಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಧೂಳಿನ ರೂಪದ ಅದಿರು ತುಂಬಿಕೊಂಡು ಸಂಚರಿಸುವ ಲಾರಿಗಳಿಂದ ಹಳ್ಳಿಗರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಹಲವರು ಕೆಮ್ಮು, ಕಫ, ಶ್ವಾಸಕೋಶದ ತೊಂದರೆಗಳಿಗೆ ತುತ್ತಾಗಿದ್ದಾರೆ. ಮನೆಗಳಲ್ಲಿ ಯಾವುದೇ ವಸ್ತುಗಳನ್ನು ಮುಟ್ಟಿದರೂ ಧೂರು ಕೈಗೆ ಮೆತ್ತಿಕೊಳ್ಳುತ್ತದೆ. ಮನೆಯಲ್ಲಿನ ಹಸುಗೂಸುಗಳನ್ನು ಈ ಧೂಳಿನಿಂದ ರಕ್ಷಿಸಲು ದೇವರೇ ಬರಬೇಕೆಂಬ ಪರಿಸ್ಥಿತಿ ಇದೆ. ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ಗಣಿ ದೂಳು ಅಡರುವುದರಿಂದ ಆ ಮೇವನ್ನೂ ಸಹ ಜಾನುವಾರುಗಳು ತಿನ್ನುವುದಿಲ್ಲ. ಲಾರಿಗಳು ಓಡಾಡಿದರೆ ಸಾಕು ಊಟದ ತಟ್ಟೆಯಲ್ಲಿ ಕೆಂಪು ಬಣ್ಣದ ಧೂಳು ಬೀಳುತ್ತದೆ, ಕುಡಿಯುವ ನೀರು ಕೆಂಪಾಗುತ್ತವೆ. ನೀರಿನ ಮೇಲೆ ತಿಳಿಗಟ್ಟುವ ಧೂಳಿನ ಕಣಗಳನ್ನು ಅರಿಯುವ ಜಾನುವಾರುಗಳು ನೀರೂ ಕುಡಿಯುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಗ್ರಾಮಸ್ಥರು ಅನುಭವಿಸುತ್ತಿದ್ದೇವೆ. ಲಾರಿಗಳು ಸಂಚರಿಸುವ ದಾರಿಯಲ್ಲಿಯೇ ಅಂಗನವಾಡಿ, ಶಿಶುವಿಹಾರ, ಸರ್ಕಾರಿ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳೂ ಇವೆ.ಮಕ್ಕಳಿಗೂ ಈ ಧೂಳಿನ ಕಾಟ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಿರು ಕಂಪನಿಗಳ ಮಾಲೀಕರು ಪರ್ಯಾಯ ರಸ್ತೆ ಮಾಡಿಕೊಂಡು ಸಾಗಾಣಿಕೆ ಮಾಡಿಕೊಳ್ಳಲಿ. ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ದೂರನ್ನು ಅವರು ಕಿವಿಗೆ ಹಾಕಿಕೊಳ್ಳದ ಕಾರಣ ಧರಣಿಗೆ ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.ಪ್ರತಿಭಟನೆಯಲ್ಲಿ ಪ್ರಭಾಕರ್, ತಿಮ್ಮಜ್ಜ, ಮಧು, ಮಾರುತಿ, ಕುಮಾರಣ್ಣ, ಸತೀಶ್, ತಿಪ್ಪೇಶ್, ಶಶಿ ಕುಮಾರ್, ವಿಜಯ್ ಕುಮಾರ್, ಸತೀಶ್, ಲೋಕೇಶ್, ನಾಗರಾಜ್, ಹನುಮಂತ ಅಂಗಡಿ ಈರಣ್ಣ, ಕುಮಾರಣ್ಣ, ಶರಣಪ್ಪ, ಕೆಂಚವೀರಪ್ಪ ಕಾಂತಣ್ಣ, ಮಂಜುನಾಥ, ಮಾರುತಿ, ಜಯಣ್ಣ, ಶ್ರೀನಿವಾಸ, ಹನುಮಂತಪ್ಪ ಆಚಾರ್, ಸತೀಶ್, ಭುವಣ್ಣ ,ರುದ್ರೇಶ್, ಹರೀಶ್, ವಸಂತ್ ಹಾಗೂ ಎಲ್ಲಾ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

-------------------------------ಮೈನಿಂಗ್ ಲಾರಿಗಳು ಲೋಡ್ ಆಗಿ ಬರುವಾಗ ಹಲವು ಬಾರಿ ಅನಾಹುತಗಳು ಸಂಭವಿಸಿವೆ. ಅನಾಹುತಗಳ ಬಗ್ಗೆ ಸಾಕಷ್ಟು ಬಾರಿ ಮೈನಿಂಗ್ ಕಂಪನಿಯವರಿಗೆ ವಿನಂತಿ ಮಾಡಿಕೊಂಡಿದ್ದರೂ ಸಹ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಆದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದೇವೆ.

ಕುಮಾರ್, ಗ್ರಾಮ ಪಂಚಾಯತ್ ಸದಸ್ಯ

Share this article