ಕವಿ ರವೀಂದ್ರನಾಥ ಠಾಗೂರರ ‘ಜನ ಗಣ ಮನ’ ಕವಿತೆ ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕಾಗಿ ಬರೆದದ್ದು ಎಂಬ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ ರಾಷ್ಟ್ರಕ್ಕೆ ಮಾಡಿದ ಮಹಾಪಮಾದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಉಡುಪಿ: ದೇಶದ ಸಂವಿಧಾನದಡಿ ರಾಷ್ಟ್ರಗೀತೆಯಾಗಿ ಅಂಗೀಕರಿಸಲ್ಪಟ್ಟ ಕವಿ ರವೀಂದ್ರನಾಥ ಠಾಗೂರರ ‘ಜನ ಗಣ ಮನ’ ಕವಿತೆ ಬ್ರಿಟಿಷ್ ಅಧಿಕಾರಿಯ ಸ್ವಾಗತಕ್ಕಾಗಿ ಬರೆದದ್ದು ಎಂಬ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ ರಾಷ್ಟ್ರಕ್ಕೆ ಮಾಡಿದ ಮಹಾಪಮಾದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಈ ಹೇಳಿಕೆಯ ಹಿಂದೆ ಬಿಜೆಪಿಯ ಮನುವಾದಿ ಚಿಂತನೆಯ ಗುಪ್ತ ಕಾರ್ಯಸೂಚನೆ ಅಡಗಿದೆ. ಸಂವಿಧಾನದ ಗೌರವ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಕಾಗೇರಿ ಅವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರಗೀತೆ ‘ಜನ ಗಣ ಮನ’ ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಐಕ್ಯತೆ ಹಾಗೂ ಸಮಗ್ರತೆಯನ್ನು ಪ್ರತಿಬಿಂಬಿಸುವ ಹಾಡಾಗಿದ್ದು, ದೇಶದ ಜನತೆಯನ್ನು “ಭಾಗ್ಯವಿಧಾತ”ರಾಗಿ ಕಾಣುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ. ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಕಾಗೇರಿ ಅವರ ಹೇಳಿಕೆ, ಅವರ ರಾಜಕೀಯ ಸಂಸ್ಕೃತಿಯ ಪ್ರತಿಫಲ ಎಂದು ಅವರು ಹೇಳಿದ್ದಾರೆ.ಧರ್ಮನಿರಪೇಕ್ಷತೆ, ಜಾತ್ಯತೀತತೆ ಮತ್ತು ವಿವಿಧತೆಯಲ್ಲಿ ಏಕತೆಯಂತಹ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸಿ, ಮನುಸ್ಮೃತಿ ಆಧಾರಿತ ವ್ಯವಸ್ಥೆಯನ್ನು ಮುಂದಿರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ, ಪಿಂಗಲಿ ವೆಂಕಯ್ಯರ ರಾಷ್ಟ್ರಧ್ವಜ ಮತ್ತು ಠಾಗೂರರ ರಾಷ್ಟ್ರಗೀತೆ-ಇವೆಲ್ಲವೂ ಬಿಜೆಪಿಯ ಮನುವಾದಿ ಚಿಂತನೆಗೆ ಅಡ್ಡಿಯಾದ ಅಂಶಗಳಾಗಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಮನೋಭಾವನೆಗಳು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತವೆ. ಈ ಚಳುವಳಿ ಮುಂದಿನ ದಿನಗಳಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಪ್ರಜಾಕ್ರಾಂತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.