ಕುಡಿಯುವ ನೀರಿಗಾಗಿ ಕಾಗಿ ಪ್ಲಾಟ್‌ ನಾರಿಯರ ಪರದಾಟ

KannadaprabhaNewsNetwork |  
Published : Apr 13, 2025, 02:03 AM IST
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಶನಿವಾರ ಕಾಗಿ ಪ್ಲಾಟ್ ಮಹಿಳೆಯರು ಶನಿವಾರ ಪುರಸಭೆ ಎದುರು ಪ್ರತಿಟನೆ ನಡೆಸಿ ಆಕ್ರೋಶ ಹೊರಹಾಕಿದರು. | Kannada Prabha

ಸಾರಾಂಶ

ಮಹಾಲಿಂಗಪುರ ದ ೧೧ನೇ ವಾರ್ಡ್‌ನ ಚಿಮ್ಮಡಗಲ್ಲಿಯ ಕಾಗಿ ಪ್ಲಾಟ್‌ನಲ್ಲಿ ಎರಡು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ನೀರು ಹುಡುಕಿಕೊಂಡು ಬೇರೆ ಬೇರೆ ಬಡಾವಣೆಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ೧೧ನೇ ವಾರ್ಡ್‌ನ ಚಿಮ್ಮಡಗಲ್ಲಿಯ ಕಾಗಿ ಪ್ಲಾಟ್‌ನಲ್ಲಿ ಎರಡು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ನೀರು ಹುಡುಕಿಕೊಂಡು ಬೇರೆ ಬೇರೆ ಬಡಾವಣೆಗೆ ಅಲೆಯುವ ಪರಿಸ್ಥಿತಿ ಉಂಟಾಗಿದೆ.

ಗಲ್ಲಿಯಲ್ಲಿ ೫೦ಕ್ಕೂ ಹೆಚ್ಚು ಮನೆಗಳಿದ್ದು, ಕೊಳವೆಬಾವಿ ಮೂಲಕ ಮನೆಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಅಂತರ್ಜಲ ಮಟ್ಟ ಕುಸಿತದಿಂದ ನೀರು ಬಾರದೇ ಸಮಸ್ಯೆ ತೀವ್ರವಾಗಿದೆ. ಇದರ ಪಕ್ಕದಲ್ಲೇ ಮತ್ತೊಂದು ಕೊಳವೆಬಾವಿ ಕೊರೆಸಿ ನೀರು ಬಿದ್ದಿದ್ದರೂ ಅದಕ್ಕೆ ಪೈಪ್ ಅಳವಡಿಸಲು ಅಧಿಕಾರಿಗಳು ಮುಂದಾಗಿಲ್ಲ. ಇದರಿಂದ ನೀರಿದ್ದರೂ ನಿರ್ವಹಣೆ ಕೊರತೆಯಿಂದ ಜನರು ಪರದಾಡುವಂತಾಗಿದೆ.

ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಶನಿವಾರ ಕಾಗಿ ಪ್ಲಾಟ್ ಮಹಿಳೆಯರು ಶನಿವಾರ ಪುರಸಭೆ ಎದುರು ಪ್ರತಿಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸಮರ್ಪಕ ನೀರು ಪೂರೈಕೆ ಆಗದಿರುವ ಕುರಿತು ಹಲವು ಬಾರಿ ಪುರಸಭೆ ಕಚೇರಿಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಅವರಿಗೆ ನೀರಿನ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿಲ್ಲ ಎಂದು ಪ್ಲಾಟ್‌ನ ಮಹಿಳೆಯರು ಆರೋಪಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಟೆಂಡರ್ ಕರೆಯದೆ ಇಂಡೆಂಟ್ ಮೇಲೆ ನೀರು ಸರಬರಾಜು, ಬೀದಿದೀಪ ಹಾಗೂ ಕೊಳವೆಬಾವಿ ದುರಸ್ತಿ ಸಂಬಂಧಿಸಿದ ಸಾಮಗ್ರಿ ಖರೀದಿಸಲಾಗುತ್ತಿದೆ. ಪ್ರತಿ ಕಾಮಗಾರಿ, ಖರೀದಿ ಸಂದರ್ಭ ಸರ್ಕಾರದ ನಿಯಮಾನುಸಾರ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಆದರೆ ಟೆಂಡರ್ ಕರೆಯದೆ ಸಾಮಗ್ರಿ ಖರೀದಿಸಿ ಅನವಶ್ಯಕವಾಗಿ ಹಣ ಪೋಲು ಮಾಡಲಾಗುತ್ತಿದೆ. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ ಆಗ್ರಹಿಸಿದ್ದಾರೆ.ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲು ೯ ಜನ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆ ಆಗಿದ್ದರೂ ನಾಲೈದು ತಿಂಗಳಾದರೂ ಸಿಬ್ಬಂದಿ ನೇಮಕಾತಿ ಆಗಿಲ್ಲ. ಘಟಕದಲ್ಲಿ ಕಸ ವಿಲೇವಾರಿ ಯಂತ್ರ ದುರಸ್ತಿಯಲ್ಲಿದೆ. ಗುತ್ತಿಗೆದಾರನಿಗೆ ಕೆಲಸದ ಆದೇಶ ನೀಡಿದರೂ ದುರಸ್ತಿಯಾಗಿಲ್ಲ.

- ಬಲವಂತಗೌಡ ಪಾಟೀಲ, ಪುರಸಭೆ ಸದಸ್ಯನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ಹಾಗೂ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಿದ ನಂತರವೇ ಎಲ್ಲಾ ಕೆಲಸ ಮಾಡಲಾಗುತ್ತದೆ. ಹೊಸದಾಗಿ ಕೊರೆದ ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಇಷ್ಟು ದಿನ ನಿರ್ವಹಣೆ ಮಾಡಿರಲಿಲ್ಲ. ಈಗ ನೀರು ಬಂದಿದೆ ಎಂಬ ವಿಷಯ ಗಮನಕ್ಕೆ ಬಂದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು.

- ಈರಣ್ಣ ದಡ್ಡಿ ಪುರಸಭೆ ಮುಖ್ಯಾಧಿಕಾರಿ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ