ನರಗುಂದ: ನಿಜಗುಣ ಶರಣರ ಕೈವಲ್ಯ ಗ್ರಂಥವು ಶ್ರದ್ಧಾಭಕ್ತಿಯಿಂದ ಧಾರ್ಮಿಕ ಕಾರ್ಯದಲ್ಲಿ ತೊಡಗುವವರ ಬದುಕನ್ನು ಬೆಳಗಲಿದೆ. ಭಕ್ತರ ಬದುಕಿಗೆ ಮಾರ್ಗದರ್ಶನ ಮಾಡಲಿದೆ ಎಂದು ಪುಣ್ಯಾರಣ್ಯ ಪತ್ರಿವನಮಠದ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.ಪಟ್ಟಣದ ಸುಕ್ಷೇತ್ರ ಪುಣ್ಯಾರಣ್ಯ ಪತ್ರಿವನ ಮಠದಲ್ಲಿ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಕಾರ್ತಿಕೋತ್ಸವವನ್ನು ದೀಪ ಬೆಳಗಿ ಮಾತನಾಡಿ, ಕೈವಲ್ಯ ಗ್ರಂಥವು ಗರಗದ ಮಡಿವಾಳಪ್ಪ ಅಜ್ಜನ ಮನಸ್ಸನ್ನು ಗೆದ್ದಿದೆ. ಈ ಗ್ರಂಥದ ಬಗ್ಗೆ ನನಗೆ ಮೊದಲೇ ತಿಳಿದಿದ್ದರೆ, ನಾನು ಕಾಶಿ ಕ್ಷೇತ್ರಕ್ಕೆ ಹೋಗುತ್ತಿರಲಿಲ್ಲವೆಂದು ಗರಗದ ಮಡಿವಾಳಪ್ಪ ಹೇಳಿದ್ದರಂತೆ. ಅಷ್ಟೊಂದು ಅರ್ಥಗರ್ಭೀತವಾಗಿದೆಯಂತೆ ಈ ಕೈವಲ್ಯ ಗ್ರಂಥ ಎಂದರು.ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಾರತೀಯರ ಬದುಕನ್ನು ಉದ್ಧಾರ ಮಾಡಲು ನಿಜಗುಣ ಶರಣರು ಕೈವಲ್ಯ ಗ್ರಂಥವನ್ನು ಬರೆದಿದ್ದಾರೆ. ಇಂತಹ ಗ್ರಂಥಗಳು ದೀಪದಂತೆ ಪ್ರತಿಯೊಬ್ಬರ ಬದುಕನ್ನು ಬೆಳಗುತ್ತವೆ ಎಂದರು.ಸಿದ್ಧಪ್ರಭು ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೈವಲ್ಯ ಗ್ರಂಥವು ಷಟ್ ಶಾಸ್ತ್ರಗಳನ್ನು ಹೊಂದಿದೆ. ದೀಪಕ್ಕೆ ಜಾತಿಭೇದ ಇಲ್ಲ. ಮೇಲು- ಕೀಳಿಲ್ಲ. ದೀಪವು ಪರಿಶುದ್ಧತೆಯನ್ನು ಹೊಂದಿದೆ. ಹೀಗಾಗಿಯೇ ದೇಶದೆಲ್ಲೆಡೆ ಮಂದಿರಗಳಲ್ಲಿ ಕಾರ್ತಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.ಚನ್ನವಿರೇಶ್ವರ ಶ್ರೀಗಳು, ಬಸಯ್ಯಸ್ವಾಮಿ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷರಾದ ದ್ಯಾಮಣ್ಣ ಸವದತ್ತಿ ಹಾಗೂ ಚಂದ್ರು ಪವಾರ, ಚಂದ್ರಶೇಖರ ಹುಣಶಿಕಟ್ಟಿ ಇತರರು ಮಾತನಾಡಿದರು. ಶ್ರೀಮಠಕ್ಕೆ ನೀರಿನ ಟ್ಯಾಂಕರ್ ನೀಡಿದ ಗುರಪ್ಪ ಸುಳ್ಳದ ಅವರನ್ನು ಶ್ರೀಮಠದಿಂದ ಪೂಜ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಮೇಶ ಯಳ್ಳೂರ, ಉಮೇಶ ಯಮೋಜಿ, ಯರಗುಪ್ಪಿ, ಕೊಣ್ಣೂರ, ಬಾಳಪ್ಪ ಚಕ್ರಸಾಲಿ, ರುದ್ರಗೌಡ ಹಿರೇಗೌಡ್ರ, ಮಲ್ಲಪ್ಪ ಸಿದ್ಧಗಿರಿ, ಎಂ.ಡಿ. ಗುದಗಿ, ಆರ್. ಬಿ. ಚಿನಿವಾಲರ, ಪ್ರಶಾಂತ ಅಳಗವಾಡಿ ಹಾಗೂ ತಲೆಮೊರಬ, ಕಲಹಾಳ, ಕುರ್ಲಗೇರಿ, ಸಿದ್ದಾಪುರ, ಬೂದಿಹಾಳ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಇದ್ದರು.