ಮರಿಯಮ್ಮನಹಳ್ಳಿ: ಕುವೆಂಪು ಅವರ ಬರಹಗಳಲ್ಲಿ ವೈಚಾರಿಕತೆಯ ತೀವ್ರತೆ ಕಾಣಬಹುದು ಎಂದು ಕೊಪ್ಪಳದ ಸ.ಪ್ರ.ದ. ಕಾಲೇಜಿನ ಕನ್ನಡ ಉಪನ್ಯಾಸಕ ಎಂ. ಸೋಮೇಶ್ ಉಪ್ಪಾರ ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮರಿಯಮ್ಮನಹಳ್ಳಿ ಹೋಬಳಿ ಘಟಕದಿಂದ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ ಮತ್ತು ವೈಚಾರಿಕತೆ ವಿಷಯ ಕುರಿತು ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ ಅಂತರ್ಮುಖಿಯಾಗದೇ ಅಧ್ಯಯನಶೀಲನಾಗಲು ಸಾಧ್ಯವಿಲ್ಲವೆಂದು ಕುವೆಂಪು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದರು. ಪುರಾಣ ಪುರುಷರ ಜೀವನವನ್ನು ಸಾಹಿತ್ಯದಲ್ಲಿ ಚಿತ್ರಿಸದೇ ಸಾಮನ್ಯ ಬಡ ಕುಟುಂಬಗಳ ಕತೆಗಳನ್ನು ಹೆಣೆದರು. ಕುವೆಂಪು 20ನೇ ಶತಮಾನಕ್ಕೆ ಬೇಕಾದ ಸಾಮಾಜಿಕ ಮೌಲ್ಯಗಳ ಬಗ್ಗೆ ವಿಶೇಷ ಗಮನ ಹರಿಸಿ ಕಾವ್ಯ ಕಾದಂಬರಿಗಳನ್ನು ಬರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕ ಕೆ.ಎಂ. ಶಿವದೇವಯ್ಯಸ್ವಾಮಿ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ಎನ್. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು. ಕಸಾಪ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಬಿ.ಎಂ.ಎಸ್. ಮೃತ್ಯುಂಹಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.
ಉಪನ್ಯಾಸಕರಾದ ಕೆ. ಸುರೇಶ್, ದುರ್ಗಾಪ್ರಸಾದ್ ಇದ್ದರು. ಗೊಲ್ಲರಹಳ್ಳಿಯ ಜಿ. ಮಲ್ಲಪ್ಪ, ಜಿ.ಕೆ. ಮೌನೇಶ್, ಕೆ.ತಿಪ್ಪಣ್ಣ ಅವರಿಂದ ಕುವೆಂಪು ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.