ಕನ್ನಡಪ್ರಭ ವಾರ್ತೆ ಕಲಬುರಗಿ
ಪುನರಾಯ್ಕೆ ಬಯಸಿ ಕಣದಲ್ಲಿರುವ ಬಿಜೆಪಿ ಹುರಿಯಾಳು ಡಾ. ಉಮೇಶ ಜಾಧವ್ ಗುರುವಾರ ಬೃಹತ್ ರ್ಯಾಲಿಯಲ್ಲಿ ಬಂದು ನಾಮಪತ್ರ ಸಲ್ಲಿಸುವುದರೊಂದಿಗೆ ಕಲಬುರಗಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಭಾರಿ ಶಕ್ತಿ ಪ್ರದರ್ಶನ ನಡೆಸಿದೆ.ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನ ರ್ಯಾಲಿಯಲ್ಲಿ ಸ್ತಳೀಯವಾಗಿ ಬಿಜೆಪಿ ಹಾಗೂ ಜೆಡಿಎಸ್ನ ಎಲ್ಲಾ ಮುಖಂಡರು ಪ್ರಮುಖರು ಪಾಲ್ಗೊಂಡಿದ್ದರು.
ನಗರದ ನಗರೇಶ್ವರ ಸ್ಕೂಲ್ನಿಂದ ಡಿಸಿ ಕಚೇರಿ ವರೆಗೂ ನಡೆದ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರೊಂದಿಗೆ ಬಂದು ಡಾ. ಜಾಧವ್ ನಾಮಪತ್ರ ಸಲ್ಲಿಸಿದರು.ತೆರೆದ ವಾಹನದಲ್ಲಿ ಬೃಹತ್ ರ್ಯಾಲಿ ನಡೆಯಿತು. ಲಂಬಾಣಿ ಸಾಂಸ್ಕೃತಿಕ ಕಲಾ ತಡಗಳೊಂದಿಗೆ ರ್ಯಾಲಿ ಕಳೆಗಟ್ಟಿತ್ತು. ಶಕ್ತಿ ಪ್ರದರ್ಶನ ರ್ಯಾಲಿಯಲ್ಲಿ ಬಿಜೆಪಿ ನಾಯಕರು ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಸರಿಯಾಗಿ 2 ಗಂಟೆಗೆ ಡಿಸಿ ಕಚೇರಿಗೆ ಬಂದ ಜಾಧವ್ ಬೆಂಬಲಿಗರೊಂದಿಗೆ, ಸೂಚಕರೊಂದಿಗೆ ಕೂಡಿಕೊಂಡು ಜಿಲ್ಲಾ ಚುನಾವಣಾಧಿಕಾರಿ ಫೌಜಿಯಾ ತರನ್ಮುನ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ರೋಡ್ ಷೋದಲ್ಲಿ ವಿಜಯೇಂದ್ರ ಮಾತು: ಗುರುವಾರ ನಡೆದ ರೋಡ್ ಷೋ ನಲ್ಲಿ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಲಬುರಗಿ ಕಾಂಗ್ರೆಸ್ ಭದ್ರಕೋಟೆ ಆಗಿತ್ತು, ಕಳೆದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಭದ್ರಕೋಟೆ ಛೀದ್ರ ಆಗಿದೆ. ಈ ಜನಸ್ತೋಮ ನೋಡಿದ್ರೆ ಮತ್ತೊಮ್ಮೆ ಕಾಂಗ್ರೆಸ್ ಭದ್ರಕೋಟೆ ಛೀದ್ರ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.ದೇವೆಗೌಡರು ಕೂಡ ದೇಶದ ಭವಿಷ್ಯ, ದೇಶದ ಭದ್ರತೆ, ದೇಶದ ರಕ್ಷಣೆ ದೃಷ್ಟಿಯಿಂದ ಸಾಥ್ ನೀಡಿದ್ದಾರೆ. ಕಾಂಗ್ರೆಸ್ ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ ಅನುದಾನ ಬೇರೆಡೆಗೆ ಡೈವರ್ಟ್ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ, ಈ ಸಮುದಾಯದವರೂ ಕಾಂಗ್ರೆಸ್ಸಿಗೆ ವಿರೋಧಿಯಾಗಿದ್ದಾರೆಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ, ರೈತರಿಗೆ ನೀಡ್ತಿದ್ದ 4 ಸಾವಿರ ಹಣ ಕಟ್ ಮಾಡಿ ಅನ್ನದಾತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಹಿಂದೂಗಳ, ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಿರಿ ಹೆಚ್ಚಾಗಿದೆ. ಇವೆಲ್ಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎಲ್ಲಾ 28 ಸ್ಥಾನ ಗೆಲ್ಲೋದು ನಿಶ್ಚಿತ ಎಂದರಲ್ಲದೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಗೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವಂತೆ ಸೇರಿದ್ದ ಜನರಲ್ಲಿ ಮನವಿ ಮಾಡಿದರು.ಅಭ್ಯರ್ಥಿ ಜಾಧವ್ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಈಚೆಗಷ್ಟೇ ಪಕ್ಷ ಸೇರಿರುವ ನಿತೀನ್ ಗುತ್ತೇದಾರ್ ಸೇರಿದಂತೆ ಅನೇಕರಿದ್ದರು.